ಲೇಖನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 13, 2012

ಮುಂಬೈ ಡೈರಿ- ನೆನಪಿನಾಳದಿಂದ -1


ನಾನು ಎಂದಿನಂತೆ  ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ  ಹೇಗೋ ಹರಸಾಹಸ ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು  ಕುಳಿತುಕೊಂಡಿದ್ದೆ. ಮುಂಬಯಿಯಲ್ಲಿ ಬೆಳಿಗ್ಗಿನ ಅವಧಿಯಲ್ಲಿ ಲೋಕಲ್ ರೈಲಿನಲ್ಲಿ ಸೀಟು ಹಿಡಿಯುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಅದು ಎಲ್ಲರಿಗೂ ಆಗುವ ಕೆಲಸವೂ ಅಲ್ಲ....ಅದಕ್ಕೂ ಅನುಭವ ಬೇಕು....೧೫ ವರುಷಗಳಿಂದ ಮುಂಬಯಿ ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಅನುಭವವೇ ನನಗೆ ಸೀಟು ಗಿಟ್ಟಿಸಿಕೊಳ್ಳುವಲ್ಲಿ ನೆರವು ಮಾಡಿದ್ದು. ರೈಲಿನಲ್ಲಿ ನಮ್ಮ ಕಚೇರಿ ತಲುಪಲು ೪೦ ನಿಮಿಷ ಬೇಕಾಗುವುದರಿಂದ  'ಉದಯವಾಣಿ' ದಿನಪತ್ರಿಕೆಯ  ಎಲ್ಲಾ ಪುಟಗಳ ಇಂಚು ಇಂಚು ಬಿಡದೇ ಓದುವುದಕ್ಕೆ ಆ ಸಮಯವನ್ನು ಬಳಸಿಕೊಳ್ಳುತಿದ್ದೆ. ಹೀಗೆ ಪತ್ರಿಕೆ ಓದುತಿದ್ದಾಗ ಜನರ  ನುಗ್ಗಾಟದ   ನಡುವೆ ಹೇಗೋ ಹೇಗೋ ಒದ್ದಾಡಿಕೊಂಡು ನಾನಿರುವ ಸೀಟಿನ ಬಳಿ ಬರುತ್ತಿರುವ ಒಬ್ಬರು ೬೦-೭೦ ರ ಹರೆಯದ ವ್ಯಕ್ತಿಯೊಬ್ಬರು ನನ್ನ ಕಣ್ಣಿಗೆ ಬಿದ್ದರು. ಕುಳಿತಿರುವ ಮಹಾನುಭಾವರುಗಳು ಯಾರೂ ಅವರ ಬಗ್ಗೆ ಗಮನ ಹರಿಸಲೇ ಇಲ್ಲ, ಅಥವಾ ಕಂಡರೂ ಕಾಣದ ಹಾಗೆ ಇದ್ದರೂ ಎನ್ನಬಹುದು. ಮುಂಬೈ ಮಹಾನಗರಿಯ ಬಸ್ಸಿನಲ್ಲಿ, ರೈಲಿನಲ್ಲಿ ಓಡಾಡುವಾಗ ವಯಸ್ಸಾದವರು, ಮಹಿಳೆಯರು ಎಂದು ಅವರಿಗೆ ತಮ್ಮ ಸೀಟನ್ನು ಬಿಟ್ಟು  ಕೊಡುವುದನ್ನು   ನಾನು ನೋಡಿದ್ದು ತುಂಬಾ ವಿರಳ. ನಾನು ಆ ವ್ಯಕ್ತಿಯ ವಯಸ್ಸಿಗೆ ಬೆಲೆ ಕೊಟ್ಟು ಅವರು ಕುಳಿತುಕೊಳ್ಳಲಿ ಎನ್ನುವ ಉದ್ದೇಶದಿಂದ ಅವರಿಗೆ ಸನ್ನೆ ಮಾಡಿ ಎದ್ದು ನಿಂತೆ. ತಕ್ಷಣ ಅಲ್ಲೇ ನಿಂತಿದ್ದ ೨೦-೨೪ ರ ವಯಸ್ಸಿನ ತರುಣ ಆ ಸೀಟಿನಲ್ಲಿ ಧೊಪ್ಪೆಂದು ಕುಳಿತುಕೊಂಡೇ ಬಿಟ್ಟ. ನಾನು ಆ ಯುವಕನನ್ನು ಕುರಿತು   'ಅರೆ ಭಾಯ್ಸಾಬ್  ಮೈ ವೋ ಅಂಕಲ್ ಕೇಲಿಯೆ ಸೀಟ್ ಚೋಡಾ ತಾ...ಉನಕೋ ಬೈಟ್ನೇ ದೋ' (ಸಹೋದರ, ನಾನು ಆ ಅಂಕಲ್ ಗೆಂದು ಸೀಟು ಬಿಟ್ಟಿದ್ದು, ಅವ್ರಿಗೆ ಕುಳಿತುಕೊಳ್ಳಲು ಬಿಡು)  ಎಂದು ಹೇಳಿದೆ. ಆಗ ಆತ ಸಿಟ್ಟಿನಲ್ಲಿ  'ಸೀಟ್ ಕೆ ಊಪರ್  ಕಿಸೀಕಾ ನಾಮ್ ಲಿಖಾ ನಹಿ ಹೈ' (ಸೀಟ್ ಮೇಲೆ ಯಾರ ಹೆಸರು ಬರೆದಿಲ್ಲ)  ಎಂದುಬಿಟ್ಟ. ನಾನು  'ವೋ ತೋ ಮುಜ್ಹೆ ಭಿ ಪತಾ ಹೈ....ಏಜ್ಡ್ ಆದ್ಮಿ ಹೈ ...ಉನಕೋ ಬೈಟ್ ನೇ ದೋ....ನಹಿನ್ ತೋ ಮೈ ಸೀಟ್ ಕ್ಯೋo ಚೋಡ್ತಾ" ( ಅದು ನನಗೂ ಗೊತ್ತು....ಅವರು ವಯಸ್ಸಾದವರು ಅವರು ಕುಳಿತುಕೊಳ್ಳಲಿ ...ಇಲ್ಲದಿದ್ದರೆ ನಾನ್ಯಾಕೆ ಸೀಟು ಬಿಡ್ತಾ ಇದ್ದೆ) ಎಂದೆ. ನಾನು ಆ ಯುವಕನಲ್ಲಿ  ಆ ವ್ಯಕ್ತಿ ಗಾಗಿ ಇಷ್ಟೆಲ್ಲಾ ಜಗಳ ಮಾಡುತ್ತಾ ಇದ್ದರೂ  ಅಲ್ಲಿ ಕುಳಿತ ಉಳಿದವರಾರೂ ಈ ಬಗ್ಗೆ ಏನೂ ಮಾತಾಡಲೇ ಇಲ್ಲ. [ರಸ್ತೆಯ ಮೇಲೆ  ಗರ್ಭಿಣಿ ಹೆಂಗಸೊಬ್ಬಳನ್ನು ೩-೪ ಜನ ಸೇರಿ ಕ್ಷುಲ್ಲಕ ಕಾರಣಕ್ಕಾಗಿ ಥಳಿಸುತಿದ್ದರೂ ಸುಮ್ಮನೆ ನೋಡುತ್ತಾ ಆ ಮಹಿಳೆಯ ಸಹಾಯಕ್ಕೆ ಧಾವಿಸದ  ಜನರೇ ಇಲ್ಲಿರುವಾಗ ಇದೇನು ಮಹಾ ಅಲ್ಲಾ ಬಿಡಿ] . ಆದರೂ ಅಲ್ಲಿಗೆ ಬಿಟ್ಟು ಬಿಡುವ ಮನಸ್ಸು ನನಗೆ ಬರಲಿಲ್ಲ. ಆ ಯುವಕ ನಾನು ಹೇಳಿದ ಮಾತಿಗೆ ಪ್ರತಿಯಾಗಿ  'ಯೆ ತೇರ ಬಾಪ್ ಕ ಸೀಟ್ ನಹಿ ಹೈ'  ಎಂದುಬಿಟ್ಟ.  ನನಗೆ ಸಿಟ್ಟು ಬರುವುದು ಬಹಳ ಕಡಿಮೆ...ಅಪರೂಪಕ್ಕೆ ಎಲ್ಲಾದರೂ ಸಿಟ್ಟು ಬಂತೆಂದರೆ ನಾನೇನು ಮಾಡುತ್ತೇನೋ  ನನಗೂ ತಿಳಿಯದ ಹಾಗೆ ವರ್ತಿಸುವ ಸ್ವಭಾವ ನನ್ನದು. ಕೋಪದ ಬರದಲ್ಲಿ ಗೋಡೆಗೆ ಗುದ್ದುವುದು, ಟಿ.ವಿ. ರಿಮೋಟ್ ನ್ನು ನೆಲಕ್ಕೆ ಬಡಿಯುವುದು ಹೀಗೆಲ್ಲಾ ಮಾಡಿದ್ದೂ ಉಂಟು. ಇಲ್ಲಿ ಆಗಿದ್ದು ಹಾಗೆ ...ಮುಂಬೈ ನಲ್ಲಿ  'ಮಾ' ಕ  'ಬೆಹನ್'  ಕ , 'ಬಾಪ್ 'ಕ   ಇಂತಹ ಬೈಗುಳ ಗಳನ್ನು [ಅವರಿಗೆ ಅದು ಬೈಗುಳ ಅನ್ನಿಸೋದೇ ಇಲ್ಲ] ಉಪಯೋಗಿಸದೆ ಮಾತಾಡುವುದು ತುಂಬಾ ವಿರಳ....ಅವುಗಳನ್ನು ಪ್ರಯೋಗಿಸದೆ  ಮಾತಾಡಿದರೆ ಆ  ಮಾತಿಗೆ ಬೆಲೆ ಇರೋಲ್ಲವೆನ್ನುವಂತೆ ಮಾತಾಡುತ್ತಾರೆ.  ಚಿಕ್ಕ ಚಿಕ್ಕ ಮಕ್ಕಳು  ಕೂಡ ಆಟ ಆಡುವಾಗ ಈ ಬೈಗುಳಗಳನ್ನು ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ.  ಆದರೆ ನನಗೆ ಅಂತಹ  ಶಬ್ಧ ಗಳನ್ನು ಬಳಸುವುದು ಹಾಗೂ ಕೇಳುವುದು ಸಹ ಇಷ್ಟವಾಗದ ಕಾರಣ ಅವನು ಹೇಳಿದ  'ಬಾಪ್ ಕ' ಎನ್ನುವ ಶಬ್ಧ  ಕೆರಳುವಂತೆ ಮಾಡಿತ್ತು.    ಆತ ಮಾತಾಡಿ ಬಾಯಿ ಮುಚ್ಚುವಷ್ಟರಲ್ಲಿ ನನ್ನ ಬಲಗೈ ಆತನ ಕೆನ್ನೆಗೆ ಬಲವಾಗಿ ಬಿದ್ದಿತ್ತು. ನನ್ನಿಂದ ಇದನ್ನು ನಿರೀಕ್ಷಿಸದಿದ್ದ ಆ ಯುವಕ  ಅವಾಕ್ಕಾಗಿ ಹೋಗಿದ್ದ......ನನಗೆ ಕೋಪ ಎಷ್ಟು ಬಂದಿತ್ತು ಎಂದರೆ ಆತನನ್ನು ಸೀಟಿನಿಂದ ಎಳೆದು ಕೆನ್ನೆಗೆ ಮತ್ತೆರಡು ಕೊಟ್ಟುಬಿಟ್ಟೆ. ಅಷ್ಟರಲ್ಲಿ ಉಳಿದವರೆಲ್ಲರೂ 'ಜಾನೇ ದೋ ಜಾನೇ ದೋ' (ಹೋಗಲಿ ಬಿಡಿ, ಹೋಗಲಿ ಬಿಡಿ )   ಎಂದು ನನ್ನ ಬಿಗಿಮುಷ್ಟಿಯಿಂದ ಆ ಯುವಕನನ್ನು ಬಿಡಿಸುವ ಪ್ರಯತ್ನ ಮಾಡುತಿದ್ದರು. ಅಷ್ಟರಲ್ಲಿ ನನ್ನ ಕೋಪವು ತಣ್ಣಗಾಗಿತ್ತು. ಆ ವಯಸ್ಸಾದ ವ್ಯಕ್ತಿಯನ್ನು ಅಲ್ಲಿ ಕೂರಿಸಿ ನಾನು ನನ್ನ ಪೇಪರ್ ನತ್ತ ಕಣ್ಣು ಹಾಯಿಸತೊಡಗಿದೆ.  ನನ್ನ ಪಕ್ಕದಲ್ಲೇ ನಿಂತಿದ್ದ ಆ ಯುವಕ  ನಾನು ಓದುತಿದ್ದ ಪತ್ರಿಕೆಯನ್ನು ನೋಡಿ (ಅದು 'ಕನ್ನಡ' ಎಂದು ಅರ್ಥೈಸಿ ಕೊಂಡಿರಬೇಕು)  'ಕಿಧರ್ ಕಿಧರ್ ಸೆ ಇಧರ್ ಆಕೆ ದಾದಾಗಿರಿ ಕರ್ತೆ ಹೈ ,ಸಬಕೋ ಭಗಾನ ಚಾಹಿಯೇ   (ಎಲ್ಲೆಲ್ಲಿಂದೋ ಇಲ್ಲಿ ಬಂದು ದಾದಾಗಿರಿ ಮಾಡ್ತಾರೆ, ಎಲ್ಲರನ್ನೂ ಓಡಿಸಬೇಕು)  ಎಂದ.  ನಾನು 'ದೇಖೋ ದಾದಾಗಿರಿ ಮೈ ನಹಿ ಕರ್ ರಹನ್ ಹ್ಞೂ, ತುಂ ಹೀ ಕರ್ ರಹೇ ಹೊ'  (ದಾದಾಗಿರಿ ನಾನು ಮಾಡ್ತಾ ಇಲ್ಲ, ನೀನೆ ಮಾಡ್ತಾ ಇದ್ದೀಯ) ಎಂದಷ್ಟೇ ಹೇಳಿ ಪೇಪರ್ ಓದುವುದನ್ನು ಮುಂದುವರಿಸಿದೆ.  ಮಹಾರಾಷ್ಟ್ರ ಮತ್ತು ಕರ್ನಾಟಕ ದ ಗಡಿ ವಿವಾದ ತಾರಕಕ್ಕೇರಿದ ಸಮಯವದು.  ಆ ಯುವಕ 'ಮರಾಠಿ' ಗ ನಾಗಿದ್ದು ತನ್ನ ಭಾಷೆಯಲ್ಲೇ ಈ ವಿಷಯದ ಬಗ್ಗೆ ಗೊಣಗಾಡುತಿದ್ದ. ಸೌತ್ ನಿಂದ, ನಾರ್ತ್ ನಿಂದ ಎಲ್ಲಾ ಇಲ್ಲಿಗೆ ಬಂದು ನಮ್ ಮೇಲೆ ದಾದಾಗಿರಿ ಮಾಡ್ತಾರೆ .ಬೆಳಗಾಂ ನಲ್ಲಿ ನಮ್ ಜನಕ್ಕೆ ಹಿಂಸೆ ಕೊಡ್ತಾ ಇದ್ದಾರೆ ..ಹೀಗೆ ಏನೇನೋ ಹೇಳ್ತಾ ಇದ್ದ....ಆತನು 'ಮರಾಠಿ' ವ್ಯಕ್ತಿ ಎಂದು ತಿಳಿದ ಉಳಿದವರು ಅವನ ಬಗ್ಗೆ ಸೌಮ್ಯ ಭಾವನೆ ತಳೆದು ಅವನ ಮಾತಿಗೆ ಹೌದು ಹೌದು ಎಂಬಂತೆ ತಲೆ ಆಡಿಸಲು ಪ್ರಾರಂಭಿಸಿದರು. ನೋಡು-  ನೋಡುತಿದ್ದಂತೆ ಅಲ್ಲಿದ್ದ ಎಲ್ಲರೂ ನನ್ನನ್ನು  'ವಿಲನ್' ತರ ನೋಡಲು ಶುರು ಮಾಡಿದರು. (ನಾನು ಅಲ್ಲಿಯವರೆಗೆ  'ಹೀರೋ ' ಆಗಿರಲಿಲ್ಲ ಎಂಬ ಪ್ರಶ್ನೆ ಬೇರೆ ) . ನಾನು ಹಿಡಿದಿದ್ದ 'ಕನ್ನಡ' ಪತ್ರಿಕೆ ಎಲ್ಲರ ಕಣ್ಣಿಗೂ ಪತ್ರಿಕೆಯಾಗಿ ಕಾಣದೆ  ವೈರಿ ಹಿಡಿದಿರುವ 'ಅಸ್ತ್ರ' ದ ತರ ಕಾಣಿಸುತ್ತಿತ್ತು. ಅವರೆಲ್ಲಾ ಅದನ್ನು ನೋಡುವ ದೃಷ್ಟಿಯೇ ಬದಲಾಗಿ ಹೋಗಿತ್ತು. ಪರಿಸ್ಥಿತಿ ತನಗೆ ಅನುಕೂಲವಾಗುತ್ತಿದೆ ಎಂಬುದನ್ನು ಗ್ರಹಿಸಿದ ಯುವಕ  ಮತ್ತೆ ನನ್ನನ್ನು ಕುರಿತು ಮಾತನಾಡಲಾರಂಭಿಸಿದ.   'ಆಪ್ ಲೋಗ್ ಕೋ ಹಮ್ ಲೋಗೋ ನೇ ಜ್ಯಾದ ಹಿ ಛೂಟ್ ದೆ ಕೆ ರಖಾ ಹೈ..ಇಸ್ಲಿಯೇ ತುಂ ಲೋಗ್ ಉಡಿ ಮಾರ್ ರಹ ಹೈ....ಪೆಹೇಲೆ ಸೆ ನಾಕ್ ದಬಾಕೆ ರಖತಾ ತೊ ಇತ್ನಾ ಹಿಮ್ಮತ್ ನಹಿ ಹೋತಿ ತುಂ ಲೋಗೊನ್ ಕೋ'   [ನಿಮಗೆಲ್ಲಾ ನಾವು ಸಲಿಗೆ ಕೊಟ್ಟಿದ್ದು ಜಾಸ್ತಿ ಆಯಿತು...ಅದ್ಕೆ ನೀವೆಲ್ಲ ಜಾಸ್ತಿ ಹಾರಾಡ್ತಾ  ಇದ್ದೀರಾ, ಮೊದಲೇ ಮೂಗು ಒತ್ತಿ ಬಿಟ್ಟಿದ್ರೆ ಇಷ್ಟು ಧೈರ್ಯ ಬರ್ತಾ ಇರ್ಲಿಲ್ಲ ನಿಮಗೆ]  ಎಂದ. ನಾನು ಜಾಸ್ತಿ ಏನು ಹೇಳೋಕೆ ಹೋಗಲಿಲ್ಲ . ಗಲ್ತಿ ತುಮಾರ ತಾ ಇಸ್ಲಿಯೇ ಮಾರ್ ಖಾಯ...ಅವ್ರ್ ಜ್ಯಾದ ಬೋಲೇಗಾ ಅವ್ರ್ ಖಾಯೇಗಾ [ ತಪ್ಪು ನಿನ್ನದಿತ್ತು. ಅದಕ್ಕೆ ಪೆಟ್ಟು ತಿಂದೆ...ಮತ್ತೆ ಜಾಸ್ತಿ ಮಾತಡಿದ್ರೆ ಮತ್ತೆ ತಿಂತೀಯ] ಅಂದೆ. ಅಷ್ಟರಲ್ಲಿ ನಾನು ಇಳಿಯೋ ನಿಲ್ದಾಣ ಬಂದು ಬಿಟ್ಟಿತ್ತು. ಅವನು ಇನ್ನೇನೋ ಬಡಬಡಿಸುತಿದ್ದ.  ಉಳಿದವರೆಲ್ಲರೂ ಹೌದು ಹೌದು ಎಂಬಂತೆ ತಲೆ ಆಡಿಸುತಿದ್ದರು.  ಆದರೆ ಇಷ್ಟೆಲ್ಲಾ ವಾದ ಯಾರಿಗಾಗಿ ನಾನು ಮಾಡುತಿದ್ದೆನೋ ಆ ವಯಸ್ಸಾದ ವ್ಯಕ್ತಿ ಕೂಡ 'ಮರಾಠಿ'  ಗ ರಾಗಿದ್ದು  ಸೌಜನ್ಯಕ್ಕಾದರೂ   ಒಂದು 'ಥ್ಯಾಂಕ್ಸ್' ಅಂತ ಹೇಳಲಿಲ್ಲ, ಮುಗುಳ್ನಗಲಿಲ್ಲ......ಅಷ್ಟೇ ಆಗಿದ್ದರೆ ನನಗೆ ಬೇಸರವಾಗುತ್ತಿರಲಿಲ್ಲ...... ಆ ಯುವಕ ಹೊರರಾಜ್ಯ ದವರ ಬಗ್ಗೆ ಮಾತನಾಡುತಿದ್ದಾಗ, ಅವರಿಗೆ ಬಯ್ಯುತಿದ್ದಾಗ ಅವನು ಹೇಳಿದ್ದು ಸರಿ ಎನ್ನುವಂತೆ ತಲೆ ಆಡಿಸಿದ್ದು ಮಾತ್ರವಲ್ಲ 'ಯೇ ಲೋಗ್ ಕೋ ಚರ್ಬಿ ಜ್ಯಾದ   ಹೋ ಗಯಾ ಹೈ' [ ಈ ಜನರಿಗೆ ಸೊಕ್ಕು ಜಾಸ್ತಿ ಆಗಿದೆ] ಎಂದು ಹೇಳಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು.   ನಾನು ಆ ವಯಸ್ಸಾದ ವ್ಯಕ್ತಿಯ ಮುಖವನ್ನೊಮ್ಮೆ ಗಂಭೀರನಾಗಿ ನೋಡಿ  ರೈಲಿನ ದ್ವಾರದೆಡೆಗೆ ಮುನ್ನೆಡೆದೆ. 
 


ಮಂಗಳವಾರ, ಜನವರಿ 3, 2012

ಮಾಡ್ಬೇಡ ಅನ್ನೋದನ್ನು ಮಾಡೊವಲ್ಲಿ ಖುಷಿ ಜಾಸ್ತಿನಾ ???



ಚಮಚೆಯನ್ನೋ, ಚೂರಿಯನ್ನೋ ಅಥವಾ ಇನ್ನೇನಾದ್ರು ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಗೋಡೆಯ ಪೇಯಿಂಟ್ ತೆಗೆಯೋದು, ಒಳಗೆ ಇರೋ ಸಿಮೆಂಟು ಕಾಣಿಸೋ ವರೆಗೆ ಕೆರೆಯುತ್ತಾ ಹೋಗೋದು ನನ್ನ ಮೂರು ವರ್ಷದ ಮಗಳು 'ಕುಶಿ' ಮಾಡುವ ಅತೀ ಮುಖ್ಯ ದಿನಚರಿಗಳಲ್ಲಿ ಒಂದು. ಹಾಲ್ ಮತ್ತೆ ಅಡಿಗೆ ಮನೆಯ ಕೋಣೆಗಳು ಈವಾಗಲೇ ಆಕೆಯ ಈ ಕುಶಲ ಕಲೆಗಳಿಂದ ಅರೆ ನಗ್ನವಾಗಿದ್ದರೆ ಬೆಡ್ ರೂಂ ನ ಕೋಣೆಗಳು ಮಾತ್ರ ನಮ್ಮನ್ನು ಮುಟ್ಟೋರು ಯಾರು ಇಲ್ಲವೆಂದು ನಿರಾಳವಾಗಿದ್ದವು. ಬೆಡ್ ರೂಂ ನ ಕೋಣೆಗಳ ನಿರಾಳತೆಗೆ ಭಂಗ ಬರುವಂತೆ ಮೊನ್ನೆ ನಾನು ನನ್ನ ಮಗಳನ್ನು ಕುರಿತು 'ಚಿನ್ನು, ಈ ಗೋಡೆ ನ ಮುಟ್ಟೋಕೆ ಹೋಗಬೇಡ, ಅದರೊಳಗೆ 'ರಾ ಒನ್' ಇದ್ದಾನೆ ಅಂತ ಹೇಳಿದೆ....'ರಾ ಒನ್ ' ಸಿನೆಮಾ ನೋಡಲು ನಮ್ಮ ಪುಟಾಣಿ ಕುಶಿ ನ ಟಾಕೀಸ್ ಗೆ ಕರ್ಕೊಂಡು ಹೋಗಿದ್ದಾಗ ಸಿನೆಮಾ ಹಾಲ್ ನಲ್ಲಿ ಗಟ್ಟಿಯಾಗಿ ಬರುವ ಶಬ್ಧ ಹಾಗೂ ಸಿನೆಮಾದ ದೃಶ್ಯ ಗಳಲ್ಲಿನ ಭೀಕರತೆ ಗೆ ಆಕೆ ಹೆದರಿಕೊಂಡಿದ್ದು ನಾವು ಅರ್ಧ ದಲ್ಲೇ ಸಿನೆಮಾ ಮುಗಿಸಿ ಬರುವಂತೆ ಮಾಡಿತ್ತು. ಅಲ್ಲಿಂದ ಮುಂದೆ ಅವಳಿಗೆ ಊಟ ಮಾಡಿಸುವಾಗ, ಹಾಲು ಕುಡಿಸುವಾಗ , ತಿನ್ನು/ ಕುಡಿ ಇಲ್ಲಾ ಅಂದ್ರೆ ರಾ ಒನ್ ಬರ್ತಾನೆ ಅಂತ ಹೆದರಿಸೋದು common ಆಗಿಬಿಟ್ಟಿತ್ತು. ಅದ್ಕೆ 'ಗೋಡೆನಲ್ಲೂ ರಾ-ಒನ್ ಇದ್ದಾನೆ ಅಂತ ಹೆದರಿಸಿದ್ದೆ. ಅಲ್ಲಿವರೆಗೆ ಆ ಗೋಡೆಗಳ ತಂಟೆಗೆ ಹೋಗದೆ ತನ್ನಷ್ಟಕ್ಕೆ ಆತ ಆಡಿಕೊಳ್ಳುತಿದ್ದ ನಮ್ಮ ಕಂದಮ್ಮನಿಗೆ ನಾನು ಹಾಗೆ ಬೆದರಿಸಿದ್ದು ಪ್ರೇರಣೆ ಕೊಡ ಬೇಕೇ??? ನಾನು ಮನೆಯಲ್ಲಿ ಇಲ್ಲದೆ ಇರೋ ಹೊತ್ತಿಗೆ, ಅಮ್ಮ ಅಡಿಗೆಮನೆಯಲ್ಲಿ ಗ್ಯಾಸ್ ಮುಂದೆ ತಲ್ಲೀನವಾಗಿರುವ ಸಮಯ ನೋಡಿಕೊಂಡು ತನ್ನ ಕೈ- ಚಳಕ ತೋರಿಸಲು ಶುರು ಹತ್ತಿಕೊಂಡಳು......ಗೋಡೆಯಲ್ಲಿ ೨-೩ ಕಡೆ ತೂತು ಮಾಡಿ ಅಡಿಗೆ ಮನೆಯೊಳಗಿರುವ ಇರುವ ಅಮ್ಮನನ್ನು ಕರೆದು ತನ್ನ ತೊದಲು ನುಡಿಗಳಲ್ಲಿ 'ಅಮ್ಮ ಅಮ್ಮ, ರಾ -ಒನ್ ಇಲ್ಲ ಇಲ್ಲಿ ,ನೋಡಮ್ಮ ' ಎನ್ನುವುದೇ !!!!! 

ಅಂದ್ರೆ ಮಕ್ಕಳು ಏನಾದ್ರೂ ಮಾಡ್ಬೇಡ ಅನ್ನೋದನ್ನು ಮಾಡೋದು ಜಾಸ್ತಿ .....ಅವ್ರಿಗೆ ಅದೊಂದು ಖುಷಿ.....ಏನು ಮಾಡುತಿದ್ದೀವಿ ಎನ್ನುವುದರ ಅರಿವು ಇಲ್ಲದ, ಮುಗ್ಧ ಮನಸ್ಸಿನ ಮಕ್ಕಳು ಹೀಗೆಲ್ಲಾ ಮಾಡೋದು ಅಪರಾಧವೇನೂ ಅಲ್ಲ ಬಿಡಿ......ಆದರೆ ದೊಡ್ಡವರಾದ ಮೇಲು ಅದನ್ನೇ ಮುಂದುವರಿಸಿದರೆ ಅದು ಖಂಡಿತಾ ಚೆನ್ನಾಗಿರೊಲ್ಲ ಅನ್ನುವುದು ನನ್ನ ಅಭಿಪ್ರಾಯ. 

ನಾವು ಸಮಾಜ ಜೀವಿಗಳು. ಒಬ್ಬರ ಹಿತಾಸಕ್ತಿಗಳು ಇನ್ನೊಬ್ಬರ ಹಿತಾಸಕ್ತಿಗಳಿಗೆ ಅಡ್ಡ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಒಟ್ಟಿಗೆ ಬೆಳೆದು ಬಾಳುವಾಗ ನಮ್ಮ ನಮ್ಮಲ್ಲೇ ಘರ್ಷಣೆ ಆಗುವ ಸಂಭವಗಳು ಇವೆ. ಹೀಗೆ ನಮ್ಮ ನಮ್ಮಲ್ಲೇ ಆಗುವ ಘರ್ಷಣೆಗಳನ್ನು ತಡೆಯುವ ಸಲುವಾಗಿ ಸಮಾಜದಲ್ಲಿ ನಾವು ಕೆಲವು ಸೂತ್ರಗಳನ್ನು ರೂಪಿಸಿಕೊಂಡಿದ್ದೇವೆ. ಜನರು ಹದ್ದು ಮೀರಿ ವರ್ತಿಸದಂತೆ ಅಡೆತಡೆಗಳನ್ನು ಹಾಕಲಾಯಿತು. ಸಮಾಜವು ಬೆಳೆದಂತೆ, ಜನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಂತೆ ಈ ಸೂತ್ರಗಳು ಸಾಲವು ಎನ್ನೋ ಅಭಿಪ್ರಾಯ ಮೂಡಿತು. ಆಗ ಸರಕಾರ ಮುಂದೆ ಬಂದು ಜನತೆಯ ಚಟುವಟಿಕೆಗಳಿಗೆ ಇತಿಮಿತಿಯನ್ನು ನಿರ್ಮಿಸಿತು. ಅಷ್ಟೇ ಅಲ್ಲದೆ ಈ ಇತಿಮಿತಿಗಳನ್ನು ಮೀರಿ ನಡೆದವರಿಗೆ ಶಿಕ್ಷೆಯನ್ನು ವಿಧಿಸಿತು.

ಮನುಷ್ಯನ ಸ್ವಭಾವ ವಿಚಿತ್ರವಾದುದು. ಸಮಾಜ ರೂಪಿಸಿದ ಸೂತ್ರಗಳನ್ನು ಮುರಿಯುವುದರಲ್ಲೇ ಸಂತೋಷ ಪಡುತ್ತಾನೆ. ಸರಕಾರದ ಗೆರೆಗಳನ್ನು ದಾಟಿ ಸುಖಿಸುತ್ತಾನೆ. ನಿಷೇಧಿಸಲಾದ ವಸ್ತುಗಳನ್ನೇ ಪಡೆಯಲು ಹಾತೊರೆಯುತ್ತಾನೆ. ಹೋಗ ಬಾರದು ಎನ್ನುವ ಮಾರ್ಗದಲ್ಲೇ ಹೋಗಲು ಇಷ್ಟ ಪಡುತ್ತಾನೆ. ಇದರಿಂದ ಅವನಿಗೂ ಕೇಡು, ನೆರೆಹೊರೆಯರಿಗೂ ಕೇಡು ಎಂಬುದನ್ನು ಮರೆತು ಬಿಡುತ್ತಾನೆ. 

ಕಳ್ಳತನ ,ಮೋಸ, ಹಿಂಸೆ ಮಾಡಬಾರದು, ಪರಸ್ತ್ರೀಯನ್ನು ಬಯಸಬಾರದು ಇವೆ ಮೊದಲಾದ ನಿಷೇಧಗಳನ್ನು ಎಲ್ಲಾ ಧರ್ಮಗಳೂ ಸಾರಿವೆ. ಆದರೆ ನಾವೆಲ್ಲಾ ಇದಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತೇವೆ. ನಮ್ಮ ಮನೆ ಹಿತ್ತಲಲ್ಲಿರುವುದಕ್ಕಿಂತ ಬೇರೆಯವರ ತೋಟದ ಹಣ್ಣು ಹಂಪಲುಗಳೇ ನಮ್ಮ ಬಾಯಿಗೆ ರುಚಿ ಎನಿಸುವುದು, ಸ್ವಂತ ಹೆಂಡತಿ ಎಷ್ಟೇ ರೂಪವತಿ ಆಗಿದ್ದರೂ ಪರರ ಹೆಂಡತಿಯೇ ಅತೀ ರೂಪಸಿಯಾಗಿ ಕಾಣಿಸುವಳು. ಒಲುಮೆಯಿಂದಲೋ, ಬಲುಮೆಯಿಂದಲೋ ಪರ ಸ್ತ್ರೀ ಸಂಗ ಮಾಡಿ ಮೈಮರೆಯುತ್ತೇವೆ. ಕೈಲಾಗದವರನ್ನು ಹಿಂಸಿಸಿ ಹರ್ಷಿಸುತ್ತೇವೆ. ಕುಡಿದು ವಾಹನಗಳನ್ನು ನಡೆಸುವುದು ಕಾನೂನು ಬಾಹಿರವೆಂದು ಗೊತ್ತಿದ್ದರೂ ಅದು ಒಂದು fashion ಅನ್ನೋ ತರ ಅದನ್ನೇ ಮಾಡಿ ಖುಷಿ ಪಡುತ್ತೇವೆ. ಟ್ರಾಫಿಕ್ ಸಿಗ್ನಲ್ ಗಳನ್ನು ಅಲಕ್ಷಿಸಿ, ಸಂಚಾರ ನಿಯಮಗಳನ್ನು ಮುರಿದು ಸಂತೋಷಪಡುತ್ತೇವೆ. ಬಸ್ಸುಗಳಲ್ಲಿ, ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ನಾವೆಷ್ಟು ಬುದ್ದಿವಂತರು ಎಂದು ಗರ್ವಪಟ್ಟು ಕೊಳ್ಳುತ್ತೇವೆ. ಹೀಗೆ ಅದೆಷ್ಟೋ ಉದಾಹರಣೆಗಳನ್ನು ಕೊಡಬಹುದು.

ಇದನ್ನೆಲ್ಲಾ ಚಿಂತಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ನಿಷಿದ್ಧ ಕೆಲಸಗಳನ್ನು ಮಾಡುವಾಗ ಒಂದು ವಿಧವಾದ ವಿಲಕ್ಷಣ ಸಂತೋಷ ದೊರಕುತ್ತದೆ. ಯಾರು ಮಾಡದೇ ಇರುವ ಮಹಾನ್ ಕೆಲಸವನ್ನು ಮಾಡಿದ್ದೆವೆಂಬಾ ಹೆಮ್ಮೆ ಮೂಡುತ್ತದೆ. ಆದರೆ ಇದರಿಂದ ಬೇರೆಯವರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ನಾವು ಚಿಂತಿಸುವುದಿಲ್ಲ. ನಿಷಿದ್ಧವಾದ ಮಾರ್ಗವನ್ನು ಅನುಸರಿಸಿದಾಗ ನಾವು ಸ್ವಲ್ಪ ಕಾಲ ಸಂತೋಷವನ್ನು ಪಡೆಯಬಹುದು, ಅಥವಾ ಈ ಮಾರ್ಗ ಜಯಪ್ರದವೂ ಆಗಬಹುದು. ಆದರೆ ನಡೆಯುವವರೆಗೂ ನಾಣ್ಯ ಎಂಬುದನ್ನು ನಾವು ಮರೆಯಬಾರದು. ಒಂದು ಸಾರಿ ಮುಗ್ಗರಿಸಿದರೆ ಮೇಲೇಳುವುದು ತುಂಬಾ ಕಷ್ಟವಾಗುತ್ತದೆ. ಎದ್ದರೂ ಲೋಕದೆದುರಿಗೆ ತಲೆಯೆತ್ತಿ ನಡೆಯುವ ಧೈರ್ಯವಿಲ್ಲದಾಗಿರುತ್ತದೆ. ಜನತೆಯ ತಿರಸ್ಕಾರ, ಅಪಹಾಸ್ಯ, ಬಹಿಷ್ಕಾರ ಗಳಿಗೆ ತುತ್ತಾಗಬೇಕಾಗುತ್ತದೆ. ಇಂತಹ ಬಾಳನ್ನು ಬಾಳುವುದಕ್ಕಿನತ ಮೊದಲೇ ಈ ಬಗ್ಗೆ ಎಚ್ಚರವಹಿಸುವುದು ಉತ್ತಮವಲ್ಲವೇ ? 

ಮಾಡಬೇಡ ಅನ್ನೋದನ್ನು ಮಾಡುವುದು ಮೊದಲಿಗೆ ವಿಲಾಸಮಯವಾಗಿ ಕಂಡು ಬಂದರೂ ಮುಂದೆ ವಿಷಾದದಲ್ಲಿ ಕೊನೆಗೊಳ್ಳುತ್ತದೆ. !!!! ಹಾಗಾದರೆ ನಿಷಿದ್ಧ ವಸ್ತುಗಳನ್ನು ವಿಷವೆಂದು ತಿಳಿದು ಸಮಾಜದಲ್ಲಿ ಹಸನಾದ ಬಾಳನ್ನು ಬಾಳೋಣ ವೇ ?

ಬುಧವಾರ, ಫೆಬ್ರವರಿ 23, 2011

ಸಂಗದೋಷ

ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆಯಬೇಕಾದರೆ ಉತ್ತಮವಾದ ಶಿಕ್ಷಣ, ಶಿಕ್ಷಣದ ಜೊತೆಗೆ ಜ್ಞಾನವು ಬೇಕು.. ಈ ಜ್ಞಾನವು ನಾವು ಕೇವಲ ಶಾಲೆಯಲ್ಲಿ ಕಲಿಯುವ ಮೂಲಕ ಪಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಒಳ್ಳೆಯ ಪುಸ್ತಕ, ಜೀವನ ಚರಿತ್ರೆಗಳಂಥ ಗ್ರಂಥಗಳಿಂದ ಉತ್ತಮ ಜ್ಞಾನಾರ್ಜನೆ ಮಾಡಿಕೊಳ್ಳಲು ಸಾಧ್ಯವಾಗುವುದು. ಜೀವನದಲ್ಲಿ ಕೇವಲ ಉತ್ತಮ ಜ್ಞಾನಾರ್ಜನೆ ಮಾಡಿಕೊಂಡರೆ ಸಾಲದು.ನಾವು ಪಡೆದುಕೊಂಡ ಜ್ಞಾನವು ಸದುಪಯೋಗವಾಗ ಬೇಕೆಂದರೆ ನಮ್ಮ ಜೊತೆಗಾರರು, ಮಿತ್ರರು ಅಷ್ಟೇ ಒಳ್ಳೆಯರಾಗಿದ್ದರೆ ಮಾತ್ರ ನಾವು ನಮ್ಮ ಜೀವನದಲ್ಲಿ ಸಫಲತೆಯನ್ನು ಸಾಧಿಸಲು ಸಾಧ್ಯ. ಸಂಗದೋಷ ಜೀವಕ್ಕೆ ಸಂಚಕಾರ ತರುವಂತ ಸಾಧ್ಯತೆಗಳು ಇವೆ...ಅದಕ್ಕೆ ಒಂದು ಸಣ್ಣ ಉದಾಹರಣೆಯೆನ್ನುವಂತೆ ಕಪ್ಪೆ ಮತ್ತು ಇಲಿಯ ಕಥೆಯನ್ನು ಹೇಳಬಯಸುತ್ತೇನೆ-

ಒಂದೂರಿನಲ್ಲಿ ಒಂದು ದೊಡ್ಡ ಕೆರೆಯಿತ್ತು. ಆ ಕೆರೆಯಲ್ಲಿ ಮೀನು-ಕಪ್ಪೆ ಇತರ ಜಲಚರಗಳು ಸ್ನೇಹ ಜೀವಿಗಳಾಗಿದ್ದವು. ಮಧ್ಯಾನ್ನ ಕೆರೆಯ ನೀರು ಬಿಸಿಯಾಗುವುದರ ಕಾರಣ ಕಪ್ಪೆ ಕೆರೆಯ ತೀರದಲ್ಲಿ ಬಂದು ಆಟವಾಡುತಿತ್ತು. ಇದನ್ನು ಇಲಿಯೊಂದು ಕಂಡು ಕಪ್ಪೆಯ ಸ್ನೇಹ ಸಂಪಾದಿಸಲು ಅದರ ಬಳಿ ಪ್ರತಿದಿನ ಬರುತಿತ್ತು. ಕೆಲವೇ ದಿನಗಳಲ್ಲಿ ಅವೆರಡು ಆತ್ಮೀಯ ಸ್ನೇಹಿತರಾದವು. ಒಂದು ದಿನ ಇಲಿ ಕಪ್ಪೆಯನ್ನು ಉದ್ದೇಶಿಸಿ ''ನಾವಿಬ್ಬರೂ ಬಹಳ ದಿನಗಳಿಂದ ಆತ್ಮೀಯ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ಮಿತ್ರತ್ವವನ್ನು ಧ್ರಡಿಕೊಳಿಸಿಕೊಳ್ಳಲು ನಮ್ಮಿಬ್ಬರ ಕಾಲುಗಳನ್ನು ಒಂದೇ ಹಗ್ಗದಿಂದ ಕಟ್ಟಿಕೊಳ್ಳೋಣ. ಆಗ ನಾವಿಬ್ಬರೂ ಒಬ್ಬರನೊಬ್ಬರು ಅಗಲದೆ ಇರುತ್ತೇವೆ'' ಎಂದು ಹೇಳಿತು. ಅದಕ್ಕೆ ಮೂಢ ಕಪ್ಪೆಯು 'ಸರಿ' ಎಂಬಂತೆ ತಲೆ ಅಲ್ಲಾಡಿಸಿತು. ಕೂಡಲೇ ಇಲಿ ಓಡಿಹೋಗಿ ಇಂದು ಹಗ್ಗದ ತುಂಡನ್ನು ಹುಡುಕಿ ತಂದು ತನ್ನ ಮತ್ತು ಕಪ್ಪೆಯ ಕಾಲುಗಳೆರಡನ್ನು ಬಿಗಿಯಾಗಿ ಕಟ್ಟಿತು. ಅವು ಹೀಗೆ ಪ್ರತಿದಿನ ಆಟ ಆಡಿ ಕುಶಿ ಪಡುತಿದ್ದವು. ಒಂದು ಮಧ್ಯಾನ್ನ ಇವೆರಡು ಆಟ ಆಡುತ್ತಿರುವ ಸಮಯಕ್ಕೆ ಸರಿಯಾಗಿ ಆಕಾಶದಲ್ಲೊಂದು ಹದ್ದು ಹಾರಿ ಬಂದಿತು. ಅದನ್ನು ನೋಡಿದ ಕೂಡಲೇ ಕಪ್ಪೆ ಚಂಗನೆ ಜಿಗಿದು ಕೆರೆಯೊಳಗೆ ಹೋಗಿಬಿಟ್ಟಿತು. ಅದರೊಂದಿಗೆ ಹಗ್ಗದಿಂದ ಕಟ್ಟಲಾಗಿದ್ದ ಇಳಿಯು ಸಹ ಕೆರೆಯಲ್ಲಿ ಬಿದ್ದು ಪ್ರಾಣವನ್ನು ಕಳೆದುಕೊಂಡಿತು. ಅದು ಸತ್ತಿದ್ದರಿಂದಾಗಿ ನೀರಿನಲ್ಲಿ ತೇಲತೊಡಗಿತು. ಅಲ್ಲೇ ಹಾರಾಡುತಿದ್ದ   ಹದ್ದು ತೇಲುತಿದ್ದ ಇಲಿಯನ್ನು ಕಂಡು ಬಿರುಸಿನಿಂದ ಹಾರಿಬಂದು ಅದನ್ನು ಗಬಕ್ ಎಂದು ಹಿಡಿದು ಹಾರಿಕೊಂಡು ಹೋಯಿತು. ಇಲಿಯು ಹದ್ದಿನೊಂದಿಗೆ ಮೇಲೆ ಹೋಗಿದ್ದರಿಂದ ಅದರೊಂದಿಗೆ ಬಂಧಿತವಾಗಿದ್ದ ಕಪ್ಪೆಯು ಅದರೊಂದಿಗೆ ಹೋಗಬೇಕಾಗಿ ಬಂದಿತು. ಹದ್ದಿಗೆ ಎಲ್ಲಿಲ್ಲದ ಸಂತೋಷ.ಒಂದೇ ಬಾಣಕ್ಕೆ ಎರಡು ಹಕ್ಕಿಗಳು.. ಹರ್ಷದಲ್ಲಿ ವೇಗವಾಗಿ ಹಾರಿ ಒಂದು ಮರದ ಮೇಲೆ ಕುಳಿತುಕೊಂಡು ಕಪ್ಪೆ ಮತ್ತು ಇಲಿಗಳನ್ನು ತಿಂದು ತೇಗಿತು. ಹೀಗೆ ಇಲಿಯ ಸಹವಾಸದಿಂದ ಕಪ್ಪೆಯು ತನ್ನ ತನ್ನ ಪ್ರಾಣವನ್ನು ಕಳೆದುಕೊಂಡಿತು. *ಆದ್ದರಿಂದ ಸ್ನೇಹ ಬೆಳೆಸುವಾಗ ವಿಚಾರಮಾಡಿ ಒಳ್ಳೆಯವರ ಸ್ನೇಹ ಬೆಳೆಸುವುದು ಉತ್ತಮವಲ್ಲವೇ ?

ಗುರುವಾರ, ಸೆಪ್ಟೆಂಬರ್ 9, 2010

ನೋವು ಬೆಳಕಾಗಬೇಕು

ಎಂಜಲೆಲೆಗಳನ್ನು ಬೀದಿಗೆಸೆದಾಗ ಹಲವಾರು ನಾಯಿಗಳು ಮುತ್ತಿಕೊಳ್ಳುತ್ತವೆ. ಬಲಿಷ್ಠ ನಾಯಿಯು ದುರ್ಬಲ ನಾಯಿಗಳನ್ನು ಕಚ್ಚಿ ಓಡಿಸುತ್ತದೆ. ಒಂದುವೇಳೆ ಎಲ್ಲ ನಾಯಿಗಳು ಸಮಬಲವಾಗಿದ್ದರೆ ಹೋರಾಟಕ್ಕಿಳಿಯುತ್ತವೆ.ಬೆಳೆದ ನಾಯಿಗಳ ಮಧ್ಯೆ ಕೃಶವಾಗಿರುವ ಮರಿನಾಯಿಯ ಪಾಡಂತೂ ಹೇಳತೀರದು. ಎಲ್ಲ ನಾಯಿಗಳಿಂದ ಕಚ್ಚಿಸಿಕೊಂಡು ಓಡಿಹೋಗಿ ಬೀದಿಯ ಒಂದು ಬದಿಯಲ್ಲಿ ಕುಳಿತುಕೊಳ್ಳುತ್ತದೆ. ಎಲ್ಲ ನಾಯಿಗಳು ಎಂಜಲೆಲೆಯನ್ನು ನೆಕ್ಕಿ ಹೊರಟುಹೋದ ಮೇಲೆ ಈ ನಾಯಿಮರಿ ಅಳುಕಿನಿಂದ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತ ಎಂಜಲೆಲೆ ರಾಶಿ ಹತ್ತಿರ ಹೋಗುತ್ತದೆ. ಆದರೆ ಅಲ್ಲೇನಿದೆ?? ಬರಿ ಎಲೆ ಮಾತ್ರ. ಒಂದು ಅಗುಳೂ ಇಲ್ಲ. ಆದರೂ ಆ ಎಲೆಗಳನ್ನು ನೆಕ್ಕಿ ತೃಪ್ತಿಪಡುತ್ತದೆ. ಇದು ಒಂದುದಿನದ ಕಥೆಯಲ್ಲ. ದಿನ ದಿನವೂ ಅನುಭವಿಸುವ ಗೋಳು. ಹೀಗೆಯೇ ಕೆಲವು ದಿನ ಕಳೆಯುತ್ತದೆ. ಮರಿನಾಯಿ ಬೆಳೆದು ಬಲಿಷ್ಠವಾಗುತ್ತದೆ. ಮುಂಚೆ ಬಲಶಾಲಿಯಾಗಿದ್ದ ನಾಯಿಗಳು ದುರ್ಬಲವಾಗುತ್ತವೆ.ಈಗ ಈ ನಾಯಿಯ ಪ್ರಭುತ್ವ. ಮುದಿನಾಯಿಗಳನ್ನು ಕಚ್ಚಿ ಓಡಿಸುತ್ತದೆ. ಮರಿನಾಯಿಗಳನ್ನು ಹತ್ತಿರ ಸೇರಿಸುವುದೇ ಇಲ್ಲ. ಹಿಂದೊಮ್ಮೆ ತಾನು ಮರಿಯಾಗಿದ್ದಾಗ ಪಟ್ಟ ಬವಣೆಗಳನ್ನು ಅದು ನೆನೆಯುವುದೇ ಇಲ್ಲ. ತನ್ನ ಈ ಪ್ರಾಯ, ಸಾಮರ್ಥ್ಯ ಶಾಶ್ವತವೆಂದೇ ತಿಳಿದು ಕ್ರೂರವಾಗಿ ವರ್ತಿಸುತ್ತದೆ. ಪ್ರಾಣಿ ಪ್ರಪಂಚದಲ್ಲಿ ಇದು ಸಾಮಾನ್ಯ. ಅಲ್ಲಿ ತಪ್ಪು ಒಪ್ಪುಗಳ ಚಿಂತನೆಗೆ ಸ್ಥಳವಿಲ್ಲ.ಪ್ರಾಣಿಗಳಿಗೆ ನ್ಯಾಯ,ನೀತಿ, ಧರ್ಮಗಳ ಸೂತ್ರಗಳು ಅನ್ವಯಿಸುವುದಿಲ್ಲ.
ಇದೆ ಮಾತನ್ನು ನಾವು ಮನುಕುಲದ ಬೇಗೆಗೆ ಹೇಳಲು ಸಾಧ್ಯವಿಲ್ಲ ಏಕೆಂದರೆ ಮಾನವ ಬ್ರಹ್ಮನ ಸರ್ವ ಶ್ರೇಷ್ಠ ಸೃಷ್ಟಿ. ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಸಾಗುತ್ತಿರುವ ವಿಕಾಸ ಜೀವಿ. ಹೀಗೆ ಹೇಳಿಕೊಂಡು ನಮ್ಮ ಭುಜಗಳನ್ನು ತಟ್ಟಿಕೊಳ್ಳಬಹುದು. ಆದರೆ ನಿಜಸ್ಥಿತಿ ಬೇರೆಯೇ ಇದೆ. ನಮ್ಮ ವರ್ತನೆ ಹಲವಾರು ಸಂದರ್ಭಗಳಲ್ಲಿ ನಾಯಿಯ ನಡತೆಗಿಂತ ಹೀನವಾಗಿರುತ್ತದೆ.ಸೊಸೆಯಾಗಿದ್ದಾಗ ಕಣ್ಣೀರಲ್ಲಿ ಕೈ ತೊಳೆಯುವ ಹೆಣ್ಣು ಅತ್ತೆಯ ಪಟ್ಟಕ್ಕೆ ಬಂದಾಗ ತನ್ನ ಸೊಸೆಗೆ ಇಲ್ಲದ ಕಿರುಕುಳ ಕೊಡುತ್ತಾಳೆ. ಶೂದ್ರಾತಿ ಶೂದ್ರನಾಗಿದ್ದವನು ಇನ್ನೊಂದು ಜಾತಿಗೆ ಮತಾಂತರಗೊಂಡಾಗ ತಾನು ಬಿಟ್ಟು ಬಂದ ಜಾತಿಯವರನ್ನು ಹೀಯಾಳಿಸುತ್ತಾನೆ. ಚುನಾವಣೆಗಳಲ್ಲಿ ಸೋತು ಕೊರಗಿಹೊಗಿದ್ದ ವ್ಯಕ್ತಿಯೊಬ್ಬನು ಅದೃಷ್ಟವಶದಿಂದ ಪಟ್ಟಕ್ಕೆ ಬಂದಾಗ ಸೋತ ಅಭ್ಯರ್ಥಿಯೆದುರು ಮೀಸೆ ತಿರುವುತ್ತಾನೆ.
 
ದಿನ ದಿನವೂ ಹೊಡೆತ ಬಡಿತದಲ್ಲೇ ಕಾಲ ನೂಕಿದ ಬಾಲಕಾರ್ಮಿಕರು ತಾವು ಬೆಳೆದು ದೊಡ್ಡವರಾದ ಮೇಲೆ ಬಾಲ ಕಾರ್ಮಿಕರನ್ನು ದಂಡಿಸುತ್ತಾರೆ. ಗುಲಾಮನು ಒಡೆಯನಾದ ಮೇಲೆ ಇತರರನ್ನು ಗುಲಾಮನಂತೆ ಕಾಣುತ್ತಾನೆ. ಕುರುಡನಿಗೆ ಪಟ್ಟ ಕಟ್ಟಿದರೆ ಅವನು ಇತರರ ಕಣ್ಣು ಕೀಳಿಸುತ್ತಾನೆ. ನಾವು ಏಕೆ ಹೀಗೆ ಮಾಡುತ್ತೇವೆ? ಇದಕ್ಕೆ ಏನು ಕಾರಣ? ನಾವು ಹಿಂದೆ ಅನುಭವಿಸಿದ ಕಷ್ಟಗಳೇ ಮುಂದೆ ಸೇಡಾಗಿ ರೂಪುಗೊಳ್ಳುವುದೇ ಇದಕ್ಕೆ ಕಾರಣ. ಇದು ತಪ್ಪು. ನಾವು ಪಟ್ಟ ಕಷ್ಟಗಳಿಂದ ನಮ್ಮ ಹೃದಯ ಪಕ್ವವಾಗಬೇಕು., ಮೃದುವಾಗಬೇಕು, ಮಾಗಿದ ಹಣ್ಣಾಗಬೇಕು. ಆಗ ನಾವುಂಡ ನೋವು ನಮಗೆ ಬೆಳಕಾಗುತ್ತದೆ. ಈ ಬೆಳೆಕಿನಿಂದ ಇತರರ ಬದುಕನ್ನು ಬೆಳಗಿಸಬಹುದು. ಇಲ್ಲದಿದ್ದರೆ ನಾವು ನಾಯಿಗಿಂತ ಕಡೆ.