Thursday, September 13, 2012

ಮುಂಬೈ ಡೈರಿ- ನೆನಪಿನಾಳದಿಂದ -1


ನಾನು ಎಂದಿನಂತೆ  ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ  ಹೇಗೋ ಹರಸಾಹಸ ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು  ಕುಳಿತುಕೊಂಡಿದ್ದೆ. ಮುಂಬಯಿಯಲ್ಲಿ ಬೆಳಿಗ್ಗಿನ ಅವಧಿಯಲ್ಲಿ ಲೋಕಲ್ ರೈಲಿನಲ್ಲಿ ಸೀಟು ಹಿಡಿಯುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಅದು ಎಲ್ಲರಿಗೂ ಆಗುವ ಕೆಲಸವೂ ಅಲ್ಲ....ಅದಕ್ಕೂ ಅನುಭವ ಬೇಕು....೧೫ ವರುಷಗಳಿಂದ ಮುಂಬಯಿ ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಅನುಭವವೇ ನನಗೆ ಸೀಟು ಗಿಟ್ಟಿಸಿಕೊಳ್ಳುವಲ್ಲಿ ನೆರವು ಮಾಡಿದ್ದು. ರೈಲಿನಲ್ಲಿ ನಮ್ಮ ಕಚೇರಿ ತಲುಪಲು ೪೦ ನಿಮಿಷ ಬೇಕಾಗುವುದರಿಂದ  'ಉದಯವಾಣಿ' ದಿನಪತ್ರಿಕೆಯ  ಎಲ್ಲಾ ಪುಟಗಳ ಇಂಚು ಇಂಚು ಬಿಡದೇ ಓದುವುದಕ್ಕೆ ಆ ಸಮಯವನ್ನು ಬಳಸಿಕೊಳ್ಳುತಿದ್ದೆ. ಹೀಗೆ ಪತ್ರಿಕೆ ಓದುತಿದ್ದಾಗ ಜನರ  ನುಗ್ಗಾಟದ   ನಡುವೆ ಹೇಗೋ ಹೇಗೋ ಒದ್ದಾಡಿಕೊಂಡು ನಾನಿರುವ ಸೀಟಿನ ಬಳಿ ಬರುತ್ತಿರುವ ಒಬ್ಬರು ೬೦-೭೦ ರ ಹರೆಯದ ವ್ಯಕ್ತಿಯೊಬ್ಬರು ನನ್ನ ಕಣ್ಣಿಗೆ ಬಿದ್ದರು. ಕುಳಿತಿರುವ ಮಹಾನುಭಾವರುಗಳು ಯಾರೂ ಅವರ ಬಗ್ಗೆ ಗಮನ ಹರಿಸಲೇ ಇಲ್ಲ, ಅಥವಾ ಕಂಡರೂ ಕಾಣದ ಹಾಗೆ ಇದ್ದರೂ ಎನ್ನಬಹುದು. ಮುಂಬೈ ಮಹಾನಗರಿಯ ಬಸ್ಸಿನಲ್ಲಿ, ರೈಲಿನಲ್ಲಿ ಓಡಾಡುವಾಗ ವಯಸ್ಸಾದವರು, ಮಹಿಳೆಯರು ಎಂದು ಅವರಿಗೆ ತಮ್ಮ ಸೀಟನ್ನು ಬಿಟ್ಟು  ಕೊಡುವುದನ್ನು   ನಾನು ನೋಡಿದ್ದು ತುಂಬಾ ವಿರಳ. ನಾನು ಆ ವ್ಯಕ್ತಿಯ ವಯಸ್ಸಿಗೆ ಬೆಲೆ ಕೊಟ್ಟು ಅವರು ಕುಳಿತುಕೊಳ್ಳಲಿ ಎನ್ನುವ ಉದ್ದೇಶದಿಂದ ಅವರಿಗೆ ಸನ್ನೆ ಮಾಡಿ ಎದ್ದು ನಿಂತೆ. ತಕ್ಷಣ ಅಲ್ಲೇ ನಿಂತಿದ್ದ ೨೦-೨೪ ರ ವಯಸ್ಸಿನ ತರುಣ ಆ ಸೀಟಿನಲ್ಲಿ ಧೊಪ್ಪೆಂದು ಕುಳಿತುಕೊಂಡೇ ಬಿಟ್ಟ. ನಾನು ಆ ಯುವಕನನ್ನು ಕುರಿತು   'ಅರೆ ಭಾಯ್ಸಾಬ್  ಮೈ ವೋ ಅಂಕಲ್ ಕೇಲಿಯೆ ಸೀಟ್ ಚೋಡಾ ತಾ...ಉನಕೋ ಬೈಟ್ನೇ ದೋ' (ಸಹೋದರ, ನಾನು ಆ ಅಂಕಲ್ ಗೆಂದು ಸೀಟು ಬಿಟ್ಟಿದ್ದು, ಅವ್ರಿಗೆ ಕುಳಿತುಕೊಳ್ಳಲು ಬಿಡು)  ಎಂದು ಹೇಳಿದೆ. ಆಗ ಆತ ಸಿಟ್ಟಿನಲ್ಲಿ  'ಸೀಟ್ ಕೆ ಊಪರ್  ಕಿಸೀಕಾ ನಾಮ್ ಲಿಖಾ ನಹಿ ಹೈ' (ಸೀಟ್ ಮೇಲೆ ಯಾರ ಹೆಸರು ಬರೆದಿಲ್ಲ)  ಎಂದುಬಿಟ್ಟ. ನಾನು  'ವೋ ತೋ ಮುಜ್ಹೆ ಭಿ ಪತಾ ಹೈ....ಏಜ್ಡ್ ಆದ್ಮಿ ಹೈ ...ಉನಕೋ ಬೈಟ್ ನೇ ದೋ....ನಹಿನ್ ತೋ ಮೈ ಸೀಟ್ ಕ್ಯೋo ಚೋಡ್ತಾ" ( ಅದು ನನಗೂ ಗೊತ್ತು....ಅವರು ವಯಸ್ಸಾದವರು ಅವರು ಕುಳಿತುಕೊಳ್ಳಲಿ ...ಇಲ್ಲದಿದ್ದರೆ ನಾನ್ಯಾಕೆ ಸೀಟು ಬಿಡ್ತಾ ಇದ್ದೆ) ಎಂದೆ. ನಾನು ಆ ಯುವಕನಲ್ಲಿ  ಆ ವ್ಯಕ್ತಿ ಗಾಗಿ ಇಷ್ಟೆಲ್ಲಾ ಜಗಳ ಮಾಡುತ್ತಾ ಇದ್ದರೂ  ಅಲ್ಲಿ ಕುಳಿತ ಉಳಿದವರಾರೂ ಈ ಬಗ್ಗೆ ಏನೂ ಮಾತಾಡಲೇ ಇಲ್ಲ. [ರಸ್ತೆಯ ಮೇಲೆ  ಗರ್ಭಿಣಿ ಹೆಂಗಸೊಬ್ಬಳನ್ನು ೩-೪ ಜನ ಸೇರಿ ಕ್ಷುಲ್ಲಕ ಕಾರಣಕ್ಕಾಗಿ ಥಳಿಸುತಿದ್ದರೂ ಸುಮ್ಮನೆ ನೋಡುತ್ತಾ ಆ ಮಹಿಳೆಯ ಸಹಾಯಕ್ಕೆ ಧಾವಿಸದ  ಜನರೇ ಇಲ್ಲಿರುವಾಗ ಇದೇನು ಮಹಾ ಅಲ್ಲಾ ಬಿಡಿ] . ಆದರೂ ಅಲ್ಲಿಗೆ ಬಿಟ್ಟು ಬಿಡುವ ಮನಸ್ಸು ನನಗೆ ಬರಲಿಲ್ಲ. ಆ ಯುವಕ ನಾನು ಹೇಳಿದ ಮಾತಿಗೆ ಪ್ರತಿಯಾಗಿ  'ಯೆ ತೇರ ಬಾಪ್ ಕ ಸೀಟ್ ನಹಿ ಹೈ'  ಎಂದುಬಿಟ್ಟ.  ನನಗೆ ಸಿಟ್ಟು ಬರುವುದು ಬಹಳ ಕಡಿಮೆ...ಅಪರೂಪಕ್ಕೆ ಎಲ್ಲಾದರೂ ಸಿಟ್ಟು ಬಂತೆಂದರೆ ನಾನೇನು ಮಾಡುತ್ತೇನೋ  ನನಗೂ ತಿಳಿಯದ ಹಾಗೆ ವರ್ತಿಸುವ ಸ್ವಭಾವ ನನ್ನದು. ಕೋಪದ ಬರದಲ್ಲಿ ಗೋಡೆಗೆ ಗುದ್ದುವುದು, ಟಿ.ವಿ. ರಿಮೋಟ್ ನ್ನು ನೆಲಕ್ಕೆ ಬಡಿಯುವುದು ಹೀಗೆಲ್ಲಾ ಮಾಡಿದ್ದೂ ಉಂಟು. ಇಲ್ಲಿ ಆಗಿದ್ದು ಹಾಗೆ ...ಮುಂಬೈ ನಲ್ಲಿ  'ಮಾ' ಕ  'ಬೆಹನ್'  ಕ , 'ಬಾಪ್ 'ಕ   ಇಂತಹ ಬೈಗುಳ ಗಳನ್ನು [ಅವರಿಗೆ ಅದು ಬೈಗುಳ ಅನ್ನಿಸೋದೇ ಇಲ್ಲ] ಉಪಯೋಗಿಸದೆ ಮಾತಾಡುವುದು ತುಂಬಾ ವಿರಳ....ಅವುಗಳನ್ನು ಪ್ರಯೋಗಿಸದೆ  ಮಾತಾಡಿದರೆ ಆ  ಮಾತಿಗೆ ಬೆಲೆ ಇರೋಲ್ಲವೆನ್ನುವಂತೆ ಮಾತಾಡುತ್ತಾರೆ.  ಚಿಕ್ಕ ಚಿಕ್ಕ ಮಕ್ಕಳು  ಕೂಡ ಆಟ ಆಡುವಾಗ ಈ ಬೈಗುಳಗಳನ್ನು ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ.  ಆದರೆ ನನಗೆ ಅಂತಹ  ಶಬ್ಧ ಗಳನ್ನು ಬಳಸುವುದು ಹಾಗೂ ಕೇಳುವುದು ಸಹ ಇಷ್ಟವಾಗದ ಕಾರಣ ಅವನು ಹೇಳಿದ  'ಬಾಪ್ ಕ' ಎನ್ನುವ ಶಬ್ಧ  ಕೆರಳುವಂತೆ ಮಾಡಿತ್ತು.    ಆತ ಮಾತಾಡಿ ಬಾಯಿ ಮುಚ್ಚುವಷ್ಟರಲ್ಲಿ ನನ್ನ ಬಲಗೈ ಆತನ ಕೆನ್ನೆಗೆ ಬಲವಾಗಿ ಬಿದ್ದಿತ್ತು. ನನ್ನಿಂದ ಇದನ್ನು ನಿರೀಕ್ಷಿಸದಿದ್ದ ಆ ಯುವಕ  ಅವಾಕ್ಕಾಗಿ ಹೋಗಿದ್ದ......ನನಗೆ ಕೋಪ ಎಷ್ಟು ಬಂದಿತ್ತು ಎಂದರೆ ಆತನನ್ನು ಸೀಟಿನಿಂದ ಎಳೆದು ಕೆನ್ನೆಗೆ ಮತ್ತೆರಡು ಕೊಟ್ಟುಬಿಟ್ಟೆ. ಅಷ್ಟರಲ್ಲಿ ಉಳಿದವರೆಲ್ಲರೂ 'ಜಾನೇ ದೋ ಜಾನೇ ದೋ' (ಹೋಗಲಿ ಬಿಡಿ, ಹೋಗಲಿ ಬಿಡಿ )   ಎಂದು ನನ್ನ ಬಿಗಿಮುಷ್ಟಿಯಿಂದ ಆ ಯುವಕನನ್ನು ಬಿಡಿಸುವ ಪ್ರಯತ್ನ ಮಾಡುತಿದ್ದರು. ಅಷ್ಟರಲ್ಲಿ ನನ್ನ ಕೋಪವು ತಣ್ಣಗಾಗಿತ್ತು. ಆ ವಯಸ್ಸಾದ ವ್ಯಕ್ತಿಯನ್ನು ಅಲ್ಲಿ ಕೂರಿಸಿ ನಾನು ನನ್ನ ಪೇಪರ್ ನತ್ತ ಕಣ್ಣು ಹಾಯಿಸತೊಡಗಿದೆ.  ನನ್ನ ಪಕ್ಕದಲ್ಲೇ ನಿಂತಿದ್ದ ಆ ಯುವಕ  ನಾನು ಓದುತಿದ್ದ ಪತ್ರಿಕೆಯನ್ನು ನೋಡಿ (ಅದು 'ಕನ್ನಡ' ಎಂದು ಅರ್ಥೈಸಿ ಕೊಂಡಿರಬೇಕು)  'ಕಿಧರ್ ಕಿಧರ್ ಸೆ ಇಧರ್ ಆಕೆ ದಾದಾಗಿರಿ ಕರ್ತೆ ಹೈ ,ಸಬಕೋ ಭಗಾನ ಚಾಹಿಯೇ   (ಎಲ್ಲೆಲ್ಲಿಂದೋ ಇಲ್ಲಿ ಬಂದು ದಾದಾಗಿರಿ ಮಾಡ್ತಾರೆ, ಎಲ್ಲರನ್ನೂ ಓಡಿಸಬೇಕು)  ಎಂದ.  ನಾನು 'ದೇಖೋ ದಾದಾಗಿರಿ ಮೈ ನಹಿ ಕರ್ ರಹನ್ ಹ್ಞೂ, ತುಂ ಹೀ ಕರ್ ರಹೇ ಹೊ'  (ದಾದಾಗಿರಿ ನಾನು ಮಾಡ್ತಾ ಇಲ್ಲ, ನೀನೆ ಮಾಡ್ತಾ ಇದ್ದೀಯ) ಎಂದಷ್ಟೇ ಹೇಳಿ ಪೇಪರ್ ಓದುವುದನ್ನು ಮುಂದುವರಿಸಿದೆ.  ಮಹಾರಾಷ್ಟ್ರ ಮತ್ತು ಕರ್ನಾಟಕ ದ ಗಡಿ ವಿವಾದ ತಾರಕಕ್ಕೇರಿದ ಸಮಯವದು.  ಆ ಯುವಕ 'ಮರಾಠಿ' ಗ ನಾಗಿದ್ದು ತನ್ನ ಭಾಷೆಯಲ್ಲೇ ಈ ವಿಷಯದ ಬಗ್ಗೆ ಗೊಣಗಾಡುತಿದ್ದ. ಸೌತ್ ನಿಂದ, ನಾರ್ತ್ ನಿಂದ ಎಲ್ಲಾ ಇಲ್ಲಿಗೆ ಬಂದು ನಮ್ ಮೇಲೆ ದಾದಾಗಿರಿ ಮಾಡ್ತಾರೆ .ಬೆಳಗಾಂ ನಲ್ಲಿ ನಮ್ ಜನಕ್ಕೆ ಹಿಂಸೆ ಕೊಡ್ತಾ ಇದ್ದಾರೆ ..ಹೀಗೆ ಏನೇನೋ ಹೇಳ್ತಾ ಇದ್ದ....ಆತನು 'ಮರಾಠಿ' ವ್ಯಕ್ತಿ ಎಂದು ತಿಳಿದ ಉಳಿದವರು ಅವನ ಬಗ್ಗೆ ಸೌಮ್ಯ ಭಾವನೆ ತಳೆದು ಅವನ ಮಾತಿಗೆ ಹೌದು ಹೌದು ಎಂಬಂತೆ ತಲೆ ಆಡಿಸಲು ಪ್ರಾರಂಭಿಸಿದರು. ನೋಡು-  ನೋಡುತಿದ್ದಂತೆ ಅಲ್ಲಿದ್ದ ಎಲ್ಲರೂ ನನ್ನನ್ನು  'ವಿಲನ್' ತರ ನೋಡಲು ಶುರು ಮಾಡಿದರು. (ನಾನು ಅಲ್ಲಿಯವರೆಗೆ  'ಹೀರೋ ' ಆಗಿರಲಿಲ್ಲ ಎಂಬ ಪ್ರಶ್ನೆ ಬೇರೆ ) . ನಾನು ಹಿಡಿದಿದ್ದ 'ಕನ್ನಡ' ಪತ್ರಿಕೆ ಎಲ್ಲರ ಕಣ್ಣಿಗೂ ಪತ್ರಿಕೆಯಾಗಿ ಕಾಣದೆ  ವೈರಿ ಹಿಡಿದಿರುವ 'ಅಸ್ತ್ರ' ದ ತರ ಕಾಣಿಸುತ್ತಿತ್ತು. ಅವರೆಲ್ಲಾ ಅದನ್ನು ನೋಡುವ ದೃಷ್ಟಿಯೇ ಬದಲಾಗಿ ಹೋಗಿತ್ತು. ಪರಿಸ್ಥಿತಿ ತನಗೆ ಅನುಕೂಲವಾಗುತ್ತಿದೆ ಎಂಬುದನ್ನು ಗ್ರಹಿಸಿದ ಯುವಕ  ಮತ್ತೆ ನನ್ನನ್ನು ಕುರಿತು ಮಾತನಾಡಲಾರಂಭಿಸಿದ.   'ಆಪ್ ಲೋಗ್ ಕೋ ಹಮ್ ಲೋಗೋ ನೇ ಜ್ಯಾದ ಹಿ ಛೂಟ್ ದೆ ಕೆ ರಖಾ ಹೈ..ಇಸ್ಲಿಯೇ ತುಂ ಲೋಗ್ ಉಡಿ ಮಾರ್ ರಹ ಹೈ....ಪೆಹೇಲೆ ಸೆ ನಾಕ್ ದಬಾಕೆ ರಖತಾ ತೊ ಇತ್ನಾ ಹಿಮ್ಮತ್ ನಹಿ ಹೋತಿ ತುಂ ಲೋಗೊನ್ ಕೋ'   [ನಿಮಗೆಲ್ಲಾ ನಾವು ಸಲಿಗೆ ಕೊಟ್ಟಿದ್ದು ಜಾಸ್ತಿ ಆಯಿತು...ಅದ್ಕೆ ನೀವೆಲ್ಲ ಜಾಸ್ತಿ ಹಾರಾಡ್ತಾ  ಇದ್ದೀರಾ, ಮೊದಲೇ ಮೂಗು ಒತ್ತಿ ಬಿಟ್ಟಿದ್ರೆ ಇಷ್ಟು ಧೈರ್ಯ ಬರ್ತಾ ಇರ್ಲಿಲ್ಲ ನಿಮಗೆ]  ಎಂದ. ನಾನು ಜಾಸ್ತಿ ಏನು ಹೇಳೋಕೆ ಹೋಗಲಿಲ್ಲ . ಗಲ್ತಿ ತುಮಾರ ತಾ ಇಸ್ಲಿಯೇ ಮಾರ್ ಖಾಯ...ಅವ್ರ್ ಜ್ಯಾದ ಬೋಲೇಗಾ ಅವ್ರ್ ಖಾಯೇಗಾ [ ತಪ್ಪು ನಿನ್ನದಿತ್ತು. ಅದಕ್ಕೆ ಪೆಟ್ಟು ತಿಂದೆ...ಮತ್ತೆ ಜಾಸ್ತಿ ಮಾತಡಿದ್ರೆ ಮತ್ತೆ ತಿಂತೀಯ] ಅಂದೆ. ಅಷ್ಟರಲ್ಲಿ ನಾನು ಇಳಿಯೋ ನಿಲ್ದಾಣ ಬಂದು ಬಿಟ್ಟಿತ್ತು. ಅವನು ಇನ್ನೇನೋ ಬಡಬಡಿಸುತಿದ್ದ.  ಉಳಿದವರೆಲ್ಲರೂ ಹೌದು ಹೌದು ಎಂಬಂತೆ ತಲೆ ಆಡಿಸುತಿದ್ದರು.  ಆದರೆ ಇಷ್ಟೆಲ್ಲಾ ವಾದ ಯಾರಿಗಾಗಿ ನಾನು ಮಾಡುತಿದ್ದೆನೋ ಆ ವಯಸ್ಸಾದ ವ್ಯಕ್ತಿ ಕೂಡ 'ಮರಾಠಿ'  ಗ ರಾಗಿದ್ದು  ಸೌಜನ್ಯಕ್ಕಾದರೂ   ಒಂದು 'ಥ್ಯಾಂಕ್ಸ್' ಅಂತ ಹೇಳಲಿಲ್ಲ, ಮುಗುಳ್ನಗಲಿಲ್ಲ......ಅಷ್ಟೇ ಆಗಿದ್ದರೆ ನನಗೆ ಬೇಸರವಾಗುತ್ತಿರಲಿಲ್ಲ...... ಆ ಯುವಕ ಹೊರರಾಜ್ಯ ದವರ ಬಗ್ಗೆ ಮಾತನಾಡುತಿದ್ದಾಗ, ಅವರಿಗೆ ಬಯ್ಯುತಿದ್ದಾಗ ಅವನು ಹೇಳಿದ್ದು ಸರಿ ಎನ್ನುವಂತೆ ತಲೆ ಆಡಿಸಿದ್ದು ಮಾತ್ರವಲ್ಲ 'ಯೇ ಲೋಗ್ ಕೋ ಚರ್ಬಿ ಜ್ಯಾದ   ಹೋ ಗಯಾ ಹೈ' [ ಈ ಜನರಿಗೆ ಸೊಕ್ಕು ಜಾಸ್ತಿ ಆಗಿದೆ] ಎಂದು ಹೇಳಿದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತ್ತು.   ನಾನು ಆ ವಯಸ್ಸಾದ ವ್ಯಕ್ತಿಯ ಮುಖವನ್ನೊಮ್ಮೆ ಗಂಭೀರನಾಗಿ ನೋಡಿ  ರೈಲಿನ ದ್ವಾರದೆಡೆಗೆ ಮುನ್ನೆಡೆದೆ. 
 


Sunday, February 26, 2012

ಅನಾಥೆ



ರೈಲಿನಲ್ಲಿ ನಾನು ಕಂಡ 'ಕಸ ಹೆಕ್ಕುವ ಹುಡುಗಿ' ಯನ್ನು ಕುರಿತು ಈ ಕವನವನ್ನು ೨೦೦೯ ರಲ್ಲಿ ಬರೆದು ಬ್ಲಾಗ್ ನಲ್ಲಿ ಹಾಕಿದ್ದೆ. ನಾನು  ನನ್ನ ಕೆಲವು  ಗೆಳೆಯರು ಹಾಗು ನನ್ನ' ಬಾಸ್'  ಮಗನ ಸಹಾಯದಿಂದ ಆ ಹುಡುಗಿಯನ್ನು ನಮ್ಮ ಕಛೇರಿಗೆ ಹತ್ತಿರದಲ್ಲಿರುವ ಅನಾಥಶ್ರಮವೊಂದಕ್ಕೆ ೨೦೧೦ ರ ಫೆಬ್ರುವರಿ ೨೭ ರಂದು ಸೇರಿಸ್ಸುವಲ್ಲಿ ಯಶಶ್ವೀಯಾಗಿದ್ದೆ.  ಈಗ ಆ ಆಶ್ರಮದಲ್ಲಿ ಬೇರೆ ಮಕ್ಕಳ ಜೊತೆ ವಿದ್ಯಾಭ್ಯಾಸವನ್ನು ಮಾಡುತ್ತಿರುವ  ಆ ಹುಡುಗಿಗೆ 'ಮಾನಸಿ' ಎಂಬ ಹೆಸರನ್ನಿಟ್ಟು ಆಶ್ರಮದವರು  ಪ್ರತಿ ಫೆಬ್ರುವರಿ ತಿಂಗಳ ೨೭ ನ್ನು ಆಕೆಯ   ಜನ್ಮದಿನವೆಂದು ಆಚರಿಸುತಿದ್ದಾರೆ. ಅದರಂತೆಯೇ ನಾಳೆ ಆಕೆಯ ಜನ್ಮದಿನ......ಅವಳ ಭವಿಷ್ಯ ಸುಂದರವಾಗಿರ ಲೆಂದು ಕೋರುತ್ತಾ, ಶುಭಾಶಯವನ್ನು ಸಲ್ಲಿಸುತ್ತಾ  ಅವಳ ಕುರಿತು ಅಂದು ಬರೆದ ಕವನವನ್ನು ಪುನಃ ಇಲ್ಲಿ ಪ್ರಕಟಿಸುತಿದ್ದೇನೆ. .....










































[ಚಿತ್ರಕೃಪೆ - ಅಂತರ್ಜಾಲ ]




ಕ್ಷಣಿಕ ಸುಖದಾಸೆಗೆ ಇಹ ಮರೆತ ಪ್ರೇಮಿಗಳ
ಪ್ರೇಮದಾಟದ ಫಲವೋ
ಕಾಮುಕರ ಕಣ್ಣಿಗೆ ಬಲಿಯಾದ ಹೆಣ್ಣೊಬ್ಬಳ
ಮಾನಭಂಗದ ಫಲವೋ
ಹೆಣ್ಣು ಒಳಿತಲ್ಲ, ಗಂಡುಮಗು ಬೇಕೆಂಬವರ
ಮೂಢ ನಂಬಿಕೆಯ ಫಲವೋ
ಹಿಂದಿನ ಜನ್ಮದಲಿ ನಾ ಮಾಡಿರಬಹುದಾದ
ಘೋರ ಪಾಪಗಳ ಫಲವೋ
............................... ಹಡೆದ ತಾಯಿಗೆ ಬೇಡವಾಗಿ ಜನಿಸಿದೆ ನಾನು




ಕರುಳ ಕುಡಿಯನೇ ಕಿತ್ತು ತಿಪ್ಪೆಗೆ
ಎಸೆದ ಮಹಾತಾಯಿ ಯಾರೋ
ತಿಪ್ಪೆಯಿಂದೆತ್ತಿ ತಂದು ಸಂಭಂದ
ಬೆಸೆದ ಪುಣ್ಯಾತ್ಮರು ಯಾರೋ
ಹಸಿದಿರಲು ಹೊಟ್ಟೆ ಬಾಯಿಗೆ
ತುತ್ತು ಇಟ್ಟವರು ಯಾರೋ
ತುಂಡು ಬಟ್ಟೆಯ ಉಡಲು
ಕೊಟ್ಟವರು ಯಾರೋ
.................................. ರಸ್ತೆ ಬದಿಗಳಲಿ ಕಸ ಹೆಕ್ಕುತಿರುವೆ ನಾನು




ದೀಪಾವಳಿ, ಕ್ರಿಸ್ಮಸ್ , ರಂಜಾನ್ ಗಳೆಂಬಾ
ಹಬ್ಬಗಳು ನನಗಿಲ್ಲ
ಹೊಸವರುಷ, ಹೊಸಹರುಷ ಹೊಸ ಉಡುಪುಗಳಾ
ನಾನಿನ್ನು ನೋಡಿಲ್ಲ
ಭೂತ, ವರ್ತಮಾನ, ಭವಿಷ್ಯಗಳ
ಚಿಂತೆಯು ನನಗಿಲ್ಲ
ಕೊಲೆ ಸುಲಿಗೆ ದರೋಡೆಗಳ
ಭಯವಂತೂ ನನಗಿಲ್ಲ
..............................ಹೊಟ್ಟೆ ತುಂಬಾ ಉಂಡರೆ ಹಬ್ಬ ಎಂದುಕೊಂಡವಳು ನಾನು


ಮಳೆ ಗಾಳಿ ಬಿಸಿಲ ತಡೆದು ರಕ್ಷಣೆ ಕೊಡಲು
ನನಗೊಂದು ಸೂರಿಲ್ಲ
ಕಷ್ಟ ಕಾಲದಿ ಒದಗೋ ನೆಂಟರು ಬಂದು ಬಳಗ
ನನಗಿಂದು ಯಾರಿಲ್ಲ್ಲ
ವಿದ್ಯೆಯನು ಕೊಟ್ಟು ಬುದ್ದಿ ಕಲಿಸುವಂಥ
ಗುರುವೆಂಬುವವರಿಲ್ಲ
ಬಿಡುವಿನ ವೇಳೆಯಲಿ ಜೊತೆ ಆಡಲು ನನಗೆ
ಗೆಳೆತಿಯರೆಂಬುವರಿಲ್ಲ
...............................ದಿಕ್ಕು ದೆಸೆಯಿಲ್ಲದ ಅಲೆದಾಡುತಿರುವ ಅನಾಥೆ ನಾನು

Friday, February 17, 2012

ಕುಂದಾಪ್ರ ಜನಪದ

ಕರ್ನಾಟಕದ್ ಕೆಲು ಭಾಷೆಗಳಲ್ ನಮ್ ಕುಂದಾಪ್ರ ಭಾಷಿಯು ಒಂದ್. ಕೆಲ್ವರಿಗ್ ಈ ಭಾಷಿ ಅರ್ಥ ಆತಿಲ್ಲ ಅಂಬ್ರ್...ನಾವ್ ನಮ್ ಭಾಷೆಗ್ ಮಾತಾಡ್ರ್ ಕನ್ನಡ ಬಪ್ಪರು ಕೆಂಬ್ದ್ ಇದ್ ಯಾವ್ ಭಾಷಿ ಮರೆರೆ ಅಂದ್ಹೇಲಿ..'ಕುಂದ ಕನ್ನಡ' ಅಂದ್ರೆ ನಮ್ ಕುಂದಾಪ್ರ ಭಾಷಿ ಕಾಣಿ. ನಾವ್ ಮಾತಡುವತಿಗೆ ಜಾಸ್ತಿ ಎಳುಕ್ ಹ್ವಾತಿಲ್ಲ...ಶಾರ್ಟ್ ಕಟ್ .......ನಮ್ ಕುಂದಾಪ್ರ ಭಾಷಿ ಬಗ್ ಹೇಳುಕ್ ಹ್ವಾರೆ ಒಂದೆರಡ್ ಪೇಜೆಗ್ ಬರ್ದ್ ಹೇಳುಕ್ ಆಪ್ದ್ ಅಲ್ಲ....ನಾನ್ ಇಲ್ ಕುಂದಾಪ್ರ ಭಾಷಿ ಬಗ್ ಬರುವ ಅಂದ್ಹೇಲಿ ಬಂದದಲ್ಲ ....ಕುಂದಾಪ್ರ ಭಾಷಿ ಬಗ್ಗೆ ಇನ್ನೊಂದ್ ಸಲ ಹೇಳ್ತೆ ಅಕಾ....ನಾನ್ ನಿಮ್ಮೊಟ್ಟಿಗೆ ಕೆಲು ನಮ್ ಕುಂದಪ್ರದ್ 'ಜನಪದ' ಹಾಡ್ ಶೇರ್ ಮಾಡ್ಕಂಬ ಅಂದ್ಹೇಲಿ ಬಂದದ್...


ನಮ್ ಕುಂದಾಪ್ರದೆಗೆ ಮೊದ್ಲ್ ಭತ್ತ ತೊಳುವತಿಗೆ, ಮಗುವಿನ್ ತೊಟ್ಲ್ ತೂಗುವತಿಗೆ ಹೆಂಗ್ಸ್ರ್ ಪದ್ಯ ಹೇಳ್ತಾ ಇದ್ರ್. ಈಗ ಇದೆಲ್ಲಾ ಕೈದ್ ಐತ್.....ಅಂತ ಕೆಲು ಪದ್ಯಗಳನ್ ನಿಮ್ ಒಟ್ಟಿಗೆ ಹಂಚ್ಕಂಬಕೆ ನಂಗೆ ಖುಷಿ ಆತಿತ್......


ಭತ್ತ ತೊಳು ಕೈಗೆ ಬಯ್ಣಿ ಮುಳ್ಳ ಹೆಟ್ಟಿತ, ಮದ್ದಿಗ್ ಹ್ವಾದಣ್ಣ ಬರಲಿಲ್ಲಾ
ಮದ್ದಿಗ್ ಹ್ವಾದಣ್ಣ ಬರಲಿಲ್ಲಾ ಬಸರೂರ್ ಸೂಳಿ ಕಂಡಲ್ಲೇ ಒರಗಿದಾ....
ಹ್ಯಾo ಹ್ಞೂ..... ಹ್ಯಾ ಹ್ಞೂ .....

ಅಕ್ಕ ಸಾಕಿದ ಕೋಳಿ ಅಂಕದಲರ್ಜುನಾ, ನಾ ಸಾಕಿದ ಕೋಳಿ ಉರಿ ಹುಂಜಾ...
ನಾ ಸಾಕಿದ ಕೋಳಿ ಉರಿ ಹುಂಜಾ ಕೂಗಿದರೆ ಲಂಕಾ ಪಟ್ಟಣವೇ ಬೆಳಗೈತು....
ಹ್ಯಾo ಹ್ಞೂ ಹ್ಯಾ ಹ್ಞೂ ...

ಒಂದ್ ಮಲ್ಲಿಗಿ ಮಿಟ್ಟಿ ಅಲ್ಲಿಟ್ಟಿ ಇಲ್ಲಿಟ್ಟಿ, ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ..
ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ ಮಂದಾರ್ತಿ ತೇರ ಮೇಲಿಟ್ಟಿ ಕೈ ಮುಗ್ದಿ ..
ಹ್ಯಾಂ ಹ್ಞೂ ...ಹ್ಯಾಂ ಹ್ಞೂ .....

ಹಳ್ಳಿ ಮೇಲಿನ ಹುಡುಗ ಹಲ್ಲೆಲ್ಲ ಬೆಳ್ಳಗೆ ಬೆಳ್ಳುಳ್ಳಿ ಗೆಂಡೆ ಬಗಲಾಗೆ,
ಬೆಳ್ಳುಳ್ಳಿ ಗೆಂಡೆ ಬಗಲಾಗೆ ಇಟ್ಕೊಂಡು ಮರಳು ಮಾಡಿದನೆ ಹುಡುಗೀರ ....
ಹ್ಯಾಂ ಹ್ಞೂ...ಹ್ಯಾಂ ಹ್ಞೂ..

ಹಾದಿ ಮೇಲ್ ಹ್ವಾಪರೆ ಹಾಡೆಂದು ಕಾಣಬೇಡಿ, ಹಾಡಲ್ಲ ನನ್ನ ಒಡಲೂರಿ
ಹಾಡಲ್ಲ ನನ್ನ ಒಡಲೂರಿ ದೇವರೇ ಬೆವರಲ್ಲ ನನ್ನ ಕಣ್ಣೀರು ...
ಹ್ಯಾಂ ಹ್ಞೂ ....ಹ್ಯಾಂ ಹ್ಞೂ....

ನಮ್ಮನಿ ಸುತ್ತಲೂ ಕೆಮ್ಮಣ್ಣಿನ ಪಾಗಾರ, ಧೂಳ ಕಾಲವರೆ ಬರಬೇಡಿ ...
ಧೂಳ ಕಾಲವರೆ ಬರಬೇಡಿ ನಮ್ಮನೆಗೆ ಚಿನ್ನದ ಕಾಲ್ ಒಡೆಯರು ಬರುತಾರೆ ...
ಹ್ಯಾಂ ಹ್ಞೂ ...ಹ್ಯಾಂ ಹ್ಞೂ........

ಕೆಂಪು ಹೆಂಡತಿಯೆಂದು ಸಂತೋಷ ಪಡಬ್ಯಾಡ
ಅತ್ತಿಯ ಹಣ್ಣು ಬಲು ಕೆಂಪು
ಅತ್ತಿಯ ಹಣ್ಣು ಬಲು ಕೆಂಪು ಅಣ್ಣಯ್ಯ
ಬಿಚ್ಚಿ ಕಂಡರೆ ಹುಳು ಬಾಳ ......
ಹ್ಯಾಂ ಹ್ಞೂ ಹ್ಯಾಂ ಹ್ಞೂ...........

ಹೊಸ ನೆಂಟ್ರ ಬಂದೀರ್, ಹಸಿ ಹಾಕಿ ನೀರ್ ಕೊಡಿ
ಹಸಿನ್ ಹಾಲೆಗ್ ಎಸರಿಡಿ
ಹಸಿನ್ ಹಾಲೆಗೆ ಎಸರಿಡಿ ನಮ್ಮನಿ
ಹೆಸರು ಹತ್ತುರೇ ನೆನೆಯಲಿ.....
ಹ್ಯಾಂ ಹ್ಞೂ ಹ್ಯಾಂ ಹ್ಞೂ..................


ಭತ್ತ ತೊಳು ಹೆಣ್ಮಕ್ಳೆ ಅತ್ತಿತ್ತ ಕಾಣ್ಬೇಡಿ
ಬರ್ತಾರೆ ನಿಮ್ಮ ಬಗಿಯರ್
ಬರ್ತಾರೆ ನಿಮ್ಮ ಬಗಿಯರ್ ಹೆಣ್ಮಕ್ಳೆ
ತರ್ತಾರೆ ನಿಮಗೆ ತೌಡ್ ಹಿಟ್ಟ.....
ಹ್ಯಾಂ ಹ್ಞೂ ಹ್ಯಾಂ ಹ್ಞೂ........


ಒಂದಕ್ಕಿ ಬೆಂದಿತ್ ಒಂದಕ್ಕಿ ಬೈಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ ಅಣ್ಣಯ್ಯ
ಗಂಧದ ಚೆಕ್ಕಿ ಒಡಕ್ಕೋಡ...
ಹ್ಯಾಂ ಹ್ಞೂ...ಹ್ಯಾಂ ಹ್ಞೂ..

ಪಾರಿಜಾತದ ಹೂಗು ಪಾಗಾರಕೆರಗಿತು
ಯಾರಮ್ಮ ಹೂಗು ಕೊಯ್ಯಿಬ್ಯಾಡಿ
ಯಾರಮ್ಮ ಹೂಗು ಕೊಯ್ಯಿಬ್ಯಾಡಿ ನಮ್ಮಾನಿ
ದೇವ್ರಿಗೆ ಬೇಕು ಹೊಸ ಹೂಗು...
ಹ್ಯಾಂ ಹ್ಞೂ...ಹ್ಯಾಂ ಹ್ಞೂ

ಅಪ್ಪೈನ ಮನೆಯಲ್ಲೋ ಎಪ್ಪತ್ತು ತೆಂಗಿನ ಮರ
ಕೊನಿ ನೂರ್ ಅದ್ಕೆ ಹೆಡಿ ನೂರು
ಕೊನಿ ನೂರ್ ಅದ್ಕೆ ಹೆಡಿ ನೂರು ಅಪ್ಪಯ್ಯ
ನಂಗೂ ನನ್ ತಂಗಿಗೂ ಸರ್ ಪಾಲು....
ಹ್ಯಾಂ ಹ್ಞೂ...ಹ್ಯಾಂ ಹ್ಞೂ...

ಕೆಳ ಗೆದ್ದಿ ಕೆಸರೆಂದ ಮೇಲ್ ಗೆದ್ದಿ ಬಿಸಿಲೆಂದ
ಹೂಗಿನ್ ಹೆದ್ದರೀನೆ ಹಿಡಿದಾನ
ಹೂಗಿನ್ ಹೆದ್ದರೀನೆ ಹಿಡಿದಾನ ನನ್ ತಮ್ಮ
ಅದ್ ನಮ್ಮ ತಾಯಿ ತವರೂರು
ಹ್ಯಾಂ ಹ್ಞೂ...ಹ್ಯಾಂ ಹ್ಞೂ... [ಇನ್ನೂ ಇತ್ತ್...ಇನ್ನೊಂದ್ ಸಲ ಬರೀತೆ]



Tuesday, January 3, 2012

ಮಾಡ್ಬೇಡ ಅನ್ನೋದನ್ನು ಮಾಡೊವಲ್ಲಿ ಖುಷಿ ಜಾಸ್ತಿನಾ ???



ಚಮಚೆಯನ್ನೋ, ಚೂರಿಯನ್ನೋ ಅಥವಾ ಇನ್ನೇನಾದ್ರು ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಗೋಡೆಯ ಪೇಯಿಂಟ್ ತೆಗೆಯೋದು, ಒಳಗೆ ಇರೋ ಸಿಮೆಂಟು ಕಾಣಿಸೋ ವರೆಗೆ ಕೆರೆಯುತ್ತಾ ಹೋಗೋದು ನನ್ನ ಮೂರು ವರ್ಷದ ಮಗಳು 'ಕುಶಿ' ಮಾಡುವ ಅತೀ ಮುಖ್ಯ ದಿನಚರಿಗಳಲ್ಲಿ ಒಂದು. ಹಾಲ್ ಮತ್ತೆ ಅಡಿಗೆ ಮನೆಯ ಕೋಣೆಗಳು ಈವಾಗಲೇ ಆಕೆಯ ಈ ಕುಶಲ ಕಲೆಗಳಿಂದ ಅರೆ ನಗ್ನವಾಗಿದ್ದರೆ ಬೆಡ್ ರೂಂ ನ ಕೋಣೆಗಳು ಮಾತ್ರ ನಮ್ಮನ್ನು ಮುಟ್ಟೋರು ಯಾರು ಇಲ್ಲವೆಂದು ನಿರಾಳವಾಗಿದ್ದವು. ಬೆಡ್ ರೂಂ ನ ಕೋಣೆಗಳ ನಿರಾಳತೆಗೆ ಭಂಗ ಬರುವಂತೆ ಮೊನ್ನೆ ನಾನು ನನ್ನ ಮಗಳನ್ನು ಕುರಿತು 'ಚಿನ್ನು, ಈ ಗೋಡೆ ನ ಮುಟ್ಟೋಕೆ ಹೋಗಬೇಡ, ಅದರೊಳಗೆ 'ರಾ ಒನ್' ಇದ್ದಾನೆ ಅಂತ ಹೇಳಿದೆ....'ರಾ ಒನ್ ' ಸಿನೆಮಾ ನೋಡಲು ನಮ್ಮ ಪುಟಾಣಿ ಕುಶಿ ನ ಟಾಕೀಸ್ ಗೆ ಕರ್ಕೊಂಡು ಹೋಗಿದ್ದಾಗ ಸಿನೆಮಾ ಹಾಲ್ ನಲ್ಲಿ ಗಟ್ಟಿಯಾಗಿ ಬರುವ ಶಬ್ಧ ಹಾಗೂ ಸಿನೆಮಾದ ದೃಶ್ಯ ಗಳಲ್ಲಿನ ಭೀಕರತೆ ಗೆ ಆಕೆ ಹೆದರಿಕೊಂಡಿದ್ದು ನಾವು ಅರ್ಧ ದಲ್ಲೇ ಸಿನೆಮಾ ಮುಗಿಸಿ ಬರುವಂತೆ ಮಾಡಿತ್ತು. ಅಲ್ಲಿಂದ ಮುಂದೆ ಅವಳಿಗೆ ಊಟ ಮಾಡಿಸುವಾಗ, ಹಾಲು ಕುಡಿಸುವಾಗ , ತಿನ್ನು/ ಕುಡಿ ಇಲ್ಲಾ ಅಂದ್ರೆ ರಾ ಒನ್ ಬರ್ತಾನೆ ಅಂತ ಹೆದರಿಸೋದು common ಆಗಿಬಿಟ್ಟಿತ್ತು. ಅದ್ಕೆ 'ಗೋಡೆನಲ್ಲೂ ರಾ-ಒನ್ ಇದ್ದಾನೆ ಅಂತ ಹೆದರಿಸಿದ್ದೆ. ಅಲ್ಲಿವರೆಗೆ ಆ ಗೋಡೆಗಳ ತಂಟೆಗೆ ಹೋಗದೆ ತನ್ನಷ್ಟಕ್ಕೆ ಆತ ಆಡಿಕೊಳ್ಳುತಿದ್ದ ನಮ್ಮ ಕಂದಮ್ಮನಿಗೆ ನಾನು ಹಾಗೆ ಬೆದರಿಸಿದ್ದು ಪ್ರೇರಣೆ ಕೊಡ ಬೇಕೇ??? ನಾನು ಮನೆಯಲ್ಲಿ ಇಲ್ಲದೆ ಇರೋ ಹೊತ್ತಿಗೆ, ಅಮ್ಮ ಅಡಿಗೆಮನೆಯಲ್ಲಿ ಗ್ಯಾಸ್ ಮುಂದೆ ತಲ್ಲೀನವಾಗಿರುವ ಸಮಯ ನೋಡಿಕೊಂಡು ತನ್ನ ಕೈ- ಚಳಕ ತೋರಿಸಲು ಶುರು ಹತ್ತಿಕೊಂಡಳು......ಗೋಡೆಯಲ್ಲಿ ೨-೩ ಕಡೆ ತೂತು ಮಾಡಿ ಅಡಿಗೆ ಮನೆಯೊಳಗಿರುವ ಇರುವ ಅಮ್ಮನನ್ನು ಕರೆದು ತನ್ನ ತೊದಲು ನುಡಿಗಳಲ್ಲಿ 'ಅಮ್ಮ ಅಮ್ಮ, ರಾ -ಒನ್ ಇಲ್ಲ ಇಲ್ಲಿ ,ನೋಡಮ್ಮ ' ಎನ್ನುವುದೇ !!!!! 

ಅಂದ್ರೆ ಮಕ್ಕಳು ಏನಾದ್ರೂ ಮಾಡ್ಬೇಡ ಅನ್ನೋದನ್ನು ಮಾಡೋದು ಜಾಸ್ತಿ .....ಅವ್ರಿಗೆ ಅದೊಂದು ಖುಷಿ.....ಏನು ಮಾಡುತಿದ್ದೀವಿ ಎನ್ನುವುದರ ಅರಿವು ಇಲ್ಲದ, ಮುಗ್ಧ ಮನಸ್ಸಿನ ಮಕ್ಕಳು ಹೀಗೆಲ್ಲಾ ಮಾಡೋದು ಅಪರಾಧವೇನೂ ಅಲ್ಲ ಬಿಡಿ......ಆದರೆ ದೊಡ್ಡವರಾದ ಮೇಲು ಅದನ್ನೇ ಮುಂದುವರಿಸಿದರೆ ಅದು ಖಂಡಿತಾ ಚೆನ್ನಾಗಿರೊಲ್ಲ ಅನ್ನುವುದು ನನ್ನ ಅಭಿಪ್ರಾಯ. 

ನಾವು ಸಮಾಜ ಜೀವಿಗಳು. ಒಬ್ಬರ ಹಿತಾಸಕ್ತಿಗಳು ಇನ್ನೊಬ್ಬರ ಹಿತಾಸಕ್ತಿಗಳಿಗೆ ಅಡ್ಡ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಒಟ್ಟಿಗೆ ಬೆಳೆದು ಬಾಳುವಾಗ ನಮ್ಮ ನಮ್ಮಲ್ಲೇ ಘರ್ಷಣೆ ಆಗುವ ಸಂಭವಗಳು ಇವೆ. ಹೀಗೆ ನಮ್ಮ ನಮ್ಮಲ್ಲೇ ಆಗುವ ಘರ್ಷಣೆಗಳನ್ನು ತಡೆಯುವ ಸಲುವಾಗಿ ಸಮಾಜದಲ್ಲಿ ನಾವು ಕೆಲವು ಸೂತ್ರಗಳನ್ನು ರೂಪಿಸಿಕೊಂಡಿದ್ದೇವೆ. ಜನರು ಹದ್ದು ಮೀರಿ ವರ್ತಿಸದಂತೆ ಅಡೆತಡೆಗಳನ್ನು ಹಾಕಲಾಯಿತು. ಸಮಾಜವು ಬೆಳೆದಂತೆ, ಜನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಂತೆ ಈ ಸೂತ್ರಗಳು ಸಾಲವು ಎನ್ನೋ ಅಭಿಪ್ರಾಯ ಮೂಡಿತು. ಆಗ ಸರಕಾರ ಮುಂದೆ ಬಂದು ಜನತೆಯ ಚಟುವಟಿಕೆಗಳಿಗೆ ಇತಿಮಿತಿಯನ್ನು ನಿರ್ಮಿಸಿತು. ಅಷ್ಟೇ ಅಲ್ಲದೆ ಈ ಇತಿಮಿತಿಗಳನ್ನು ಮೀರಿ ನಡೆದವರಿಗೆ ಶಿಕ್ಷೆಯನ್ನು ವಿಧಿಸಿತು.

ಮನುಷ್ಯನ ಸ್ವಭಾವ ವಿಚಿತ್ರವಾದುದು. ಸಮಾಜ ರೂಪಿಸಿದ ಸೂತ್ರಗಳನ್ನು ಮುರಿಯುವುದರಲ್ಲೇ ಸಂತೋಷ ಪಡುತ್ತಾನೆ. ಸರಕಾರದ ಗೆರೆಗಳನ್ನು ದಾಟಿ ಸುಖಿಸುತ್ತಾನೆ. ನಿಷೇಧಿಸಲಾದ ವಸ್ತುಗಳನ್ನೇ ಪಡೆಯಲು ಹಾತೊರೆಯುತ್ತಾನೆ. ಹೋಗ ಬಾರದು ಎನ್ನುವ ಮಾರ್ಗದಲ್ಲೇ ಹೋಗಲು ಇಷ್ಟ ಪಡುತ್ತಾನೆ. ಇದರಿಂದ ಅವನಿಗೂ ಕೇಡು, ನೆರೆಹೊರೆಯರಿಗೂ ಕೇಡು ಎಂಬುದನ್ನು ಮರೆತು ಬಿಡುತ್ತಾನೆ. 

ಕಳ್ಳತನ ,ಮೋಸ, ಹಿಂಸೆ ಮಾಡಬಾರದು, ಪರಸ್ತ್ರೀಯನ್ನು ಬಯಸಬಾರದು ಇವೆ ಮೊದಲಾದ ನಿಷೇಧಗಳನ್ನು ಎಲ್ಲಾ ಧರ್ಮಗಳೂ ಸಾರಿವೆ. ಆದರೆ ನಾವೆಲ್ಲಾ ಇದಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತೇವೆ. ನಮ್ಮ ಮನೆ ಹಿತ್ತಲಲ್ಲಿರುವುದಕ್ಕಿಂತ ಬೇರೆಯವರ ತೋಟದ ಹಣ್ಣು ಹಂಪಲುಗಳೇ ನಮ್ಮ ಬಾಯಿಗೆ ರುಚಿ ಎನಿಸುವುದು, ಸ್ವಂತ ಹೆಂಡತಿ ಎಷ್ಟೇ ರೂಪವತಿ ಆಗಿದ್ದರೂ ಪರರ ಹೆಂಡತಿಯೇ ಅತೀ ರೂಪಸಿಯಾಗಿ ಕಾಣಿಸುವಳು. ಒಲುಮೆಯಿಂದಲೋ, ಬಲುಮೆಯಿಂದಲೋ ಪರ ಸ್ತ್ರೀ ಸಂಗ ಮಾಡಿ ಮೈಮರೆಯುತ್ತೇವೆ. ಕೈಲಾಗದವರನ್ನು ಹಿಂಸಿಸಿ ಹರ್ಷಿಸುತ್ತೇವೆ. ಕುಡಿದು ವಾಹನಗಳನ್ನು ನಡೆಸುವುದು ಕಾನೂನು ಬಾಹಿರವೆಂದು ಗೊತ್ತಿದ್ದರೂ ಅದು ಒಂದು fashion ಅನ್ನೋ ತರ ಅದನ್ನೇ ಮಾಡಿ ಖುಷಿ ಪಡುತ್ತೇವೆ. ಟ್ರಾಫಿಕ್ ಸಿಗ್ನಲ್ ಗಳನ್ನು ಅಲಕ್ಷಿಸಿ, ಸಂಚಾರ ನಿಯಮಗಳನ್ನು ಮುರಿದು ಸಂತೋಷಪಡುತ್ತೇವೆ. ಬಸ್ಸುಗಳಲ್ಲಿ, ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ನಾವೆಷ್ಟು ಬುದ್ದಿವಂತರು ಎಂದು ಗರ್ವಪಟ್ಟು ಕೊಳ್ಳುತ್ತೇವೆ. ಹೀಗೆ ಅದೆಷ್ಟೋ ಉದಾಹರಣೆಗಳನ್ನು ಕೊಡಬಹುದು.

ಇದನ್ನೆಲ್ಲಾ ಚಿಂತಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ನಿಷಿದ್ಧ ಕೆಲಸಗಳನ್ನು ಮಾಡುವಾಗ ಒಂದು ವಿಧವಾದ ವಿಲಕ್ಷಣ ಸಂತೋಷ ದೊರಕುತ್ತದೆ. ಯಾರು ಮಾಡದೇ ಇರುವ ಮಹಾನ್ ಕೆಲಸವನ್ನು ಮಾಡಿದ್ದೆವೆಂಬಾ ಹೆಮ್ಮೆ ಮೂಡುತ್ತದೆ. ಆದರೆ ಇದರಿಂದ ಬೇರೆಯವರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ನಾವು ಚಿಂತಿಸುವುದಿಲ್ಲ. ನಿಷಿದ್ಧವಾದ ಮಾರ್ಗವನ್ನು ಅನುಸರಿಸಿದಾಗ ನಾವು ಸ್ವಲ್ಪ ಕಾಲ ಸಂತೋಷವನ್ನು ಪಡೆಯಬಹುದು, ಅಥವಾ ಈ ಮಾರ್ಗ ಜಯಪ್ರದವೂ ಆಗಬಹುದು. ಆದರೆ ನಡೆಯುವವರೆಗೂ ನಾಣ್ಯ ಎಂಬುದನ್ನು ನಾವು ಮರೆಯಬಾರದು. ಒಂದು ಸಾರಿ ಮುಗ್ಗರಿಸಿದರೆ ಮೇಲೇಳುವುದು ತುಂಬಾ ಕಷ್ಟವಾಗುತ್ತದೆ. ಎದ್ದರೂ ಲೋಕದೆದುರಿಗೆ ತಲೆಯೆತ್ತಿ ನಡೆಯುವ ಧೈರ್ಯವಿಲ್ಲದಾಗಿರುತ್ತದೆ. ಜನತೆಯ ತಿರಸ್ಕಾರ, ಅಪಹಾಸ್ಯ, ಬಹಿಷ್ಕಾರ ಗಳಿಗೆ ತುತ್ತಾಗಬೇಕಾಗುತ್ತದೆ. ಇಂತಹ ಬಾಳನ್ನು ಬಾಳುವುದಕ್ಕಿನತ ಮೊದಲೇ ಈ ಬಗ್ಗೆ ಎಚ್ಚರವಹಿಸುವುದು ಉತ್ತಮವಲ್ಲವೇ ? 

ಮಾಡಬೇಡ ಅನ್ನೋದನ್ನು ಮಾಡುವುದು ಮೊದಲಿಗೆ ವಿಲಾಸಮಯವಾಗಿ ಕಂಡು ಬಂದರೂ ಮುಂದೆ ವಿಷಾದದಲ್ಲಿ ಕೊನೆಗೊಳ್ಳುತ್ತದೆ. !!!! ಹಾಗಾದರೆ ನಿಷಿದ್ಧ ವಸ್ತುಗಳನ್ನು ವಿಷವೆಂದು ತಿಳಿದು ಸಮಾಜದಲ್ಲಿ ಹಸನಾದ ಬಾಳನ್ನು ಬಾಳೋಣ ವೇ ?

Sunday, August 14, 2011

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.



ನನ್ನೆಲ್ಲಾ ಬ್ಲಾಗ್  ಬಾಂಧವರಿಗೆ ನಿಮ್ಮ ಮಿತ್ರ, ಸಹೋದರನ  ವಂದನೆಗಳು. ಕೆಲಸದ ಒತ್ತಡ ಹಾಗೂ ಕುಟುಂಬದ ಸದಸ್ಯರೊಬ್ಬರ ದುರ್ಮರಣದ ಕಾರಣದಿಂದ ಬ್ಲಾಗ್ ಕಡೆಗೆ ಬರಲಾಗಲಿಲ್ಲ. ಬ್ಲಾಗ್ ನಲ್ಲಿ ಏನು ಬರೆದಿಲ್ಲ ಎಂಬ ಬೇಸರಕ್ಕಿಂತ ನನ್ನ ಬ್ಲಾಗ್ ಮಿತ್ರರ ಉತ್ತಮ ಕವನ, ಕಥೆ, ಲೇಖನ ಗಳನ್ನು ಓದಲಿಕ್ಕೆ ಆಗಿಲ್ಲ ಎಂಬ ಬೇಸರವೇ ಜಾಸ್ತಿ ಇದೆ. ಎಲ್ಲರ ಬ್ಲಾಗ್ ಗೂ ಭೇಟಿಕೊಟ್ಟು ಎಲ್ಲಾ ಬರಹ ಗಳನ್ನು ನಿಧಾನವಾಗಿ ಓದುತಿದ್ದೇನೆ. ಎಲ್ಲದಕ್ಕೂ ಕಾಮೆಂಟ್ ಮಾಡಲಾಗದಿದ್ದರೂ ಎಲ್ಲಾ ಬರಹಗಳನ್ನು ಓದುವ ಪ್ರಯತ್ನ ಮಾಡುತಿದ್ದೇನೆ. ಹಾಗೆ ಈ ತಿಂಗಳಿಂದ ನನ್ನ ಬ್ಲಾಗ್ ನಲ್ಲೂ ಕೆಲವು ಬರಹಗಳು ಬರಲಿವೆ. ಅವುಗಳನ್ನು ಓದಿ ಮೊದಲಿನಂತೆ ನನ್ನನ್ನು ಪ್ರೋತ್ಸಾಹಿಸುತ್ತೀರಿ ಎಂದು ನಂಬಿರುತ್ತೇನೆ.

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. 

Sunday, April 17, 2011

ಕನಸು- ನನಸು


ಜೀವನದಲ್ಲಿ ನಾವು ಅದೆಷ್ಟೋ ಕನಸುಗಳನ್ನು ಕಾಣುತ್ತೇವೆ. ಕಂಡ ಕನಸುಗಳೆಲ್ಲಾ ನನಸಾಗುವುದಿಲ್ಲ. ಕಾಲಕ್ಕೆ ತಕ್ಕಂತೆ ಕನಸುಗಳಲ್ಲೂ ಮಾರ್ಪಾಡಾಗುತ್ತವೆ. ನಾನು ಹೈಸ್ಕೂಲ್ ಹೋಗುತ್ತಿರುವಾಗ 'ವೈದ್ಯ' ನಾಗಬೇಕೆಂಬ ಕನಸು ಕಂಡವ. ಆದರೆ ಅದು ನನಸಾಗಲಿಲ್ಲ. ಹಾಗೇಯೇ ಕಂಡ ಇನ್ನು ಕೆಲವು ಕನಸುಗಳಲ್ಲಿ ಒಂದು ಕನಸು ಈಗ ನನಸಾಗುತ್ತಿದೆ....ಅದೇ ಸಂತೋಷದಲ್ಲಿ ಮನಸ್ಸಿಗೆ ಬಂದ ಕೆಲವು ಸಾಲುಗಳನ್ನು ನಿಮ್ಮ ಮುಂದಿಡುತಿದ್ದೇನೆ..........
ಚಿತ್ರ ಕೃಪೆ - ಅಂತರ್ಜಾಲ 

ಜೀವನದಿ ಕಂಡೆ ಕನಸು ಹತ್ತು ಹಲವನು
ಅದರಲ್ಲೊಂದ ಬೆನ್ನ ಹತ್ತಿ ಮುಂದೆ ನಡೆದೆನು
ದಾರಿ ಮಧ್ಯೆ ಸಾವಿರಾರು ತೊಡಕು ಕಂಡೆನು 
ಬಾಂಧವ್ಯಗಳ ನಡುವಿನಲ್ಲೂ ಒಡಕು ಕಂಡೆನು 

ಎಷ್ಟೋ ವ್ಯರ್ಥ ಯತ್ನಗಳು ನಿರಾಸೆ ತಂದವು
ಪ್ರಶ್ನೆ ಮೇಲೆ ಪ್ರಶ್ನೆಗಳೇ ಮೂಡಿ ಬಂದವು 
ಹೃದಯದೊಳಗೆ ವೇದನೆಯು ಮನೆಯ ಮಾಡಲು 
ಮನಸು ಹೇಳುತಿತ್ತು ಮರಳಿ ಯತ್ನ ಮಾಡಲು 

ಜೀವನದ ಕಟು ಸತ್ಯಗಳು  ಅರ್ಥವಾದರೂ 
ಇಷ್ಟರಲ್ಲೇ ತುಂಬಾ ಸಮಯ ವ್ಯರ್ಥವಾಯಿತು 
ಬಂಧುಗಳ ಅಸಹಕಾರ ಸ್ಪಷ್ಟವಾದರೂ 
ಮುನ್ನುಗ್ಗೋ ಆಸೆ ಮನಸ್ಸಿನಲ್ಲಿ ದಟ್ಟವಾಯಿತು

ದೇಹಕ್ಕೀಗ ಒಂದು ಹೊಸ ಹುರುಪು ಬಂದಿದೆ
ಮಾಸಿ ಹೋದ ಕಣ್ಣುಗಳಲೂ  ಹೊಳಪು ಕಂಡಿದೆ
ಕೃಶ ದೇಹದಲ್ಲೂ ಈಗ  ಕಸುವು ಮೂಡಿದೆ  
ಮರಳಿ ಮಾಡಿದ ಯತ್ನವು ಯಶವ ತಂದಿದೆ

ಮನಸ್ಸಿನಾಳದಲ್ಲಿ ಮತ್ತೆ ಆಸೆ ಮೂಡಿದೆ
ಕನಸು ನನಸಾಗುವಂತೆ ಭಾಸವಾಗಿದೆ
ಮುದುಡಿ ಹೋದ ಸುಮವು ಈಗ ಅರಳತೊಡಗಿದೆ
ಗಡ್ದೆಯಾದ ಹಿಮವು ಕೂಡ ಕರಗತೊಡಗಿದೆ....


Friday, April 8, 2011

ಮೇಘ - ಮಳೆ


ಚಿತ್ರ ಕೃಪೆ ಇಟ್ಟಿಗೆ ಸಿಮೆಂಟು ಪ್ರಕಾಶ್ ಹೆಗ್ಡೆ


ನೀಲಿ ಬಾನಂಗಳದಿ  ಕಾರ್ಮೋಡ ಕವಿದಿದೆ
ಮೇಘಗಳ ಭಾರಕ್ಕೆ ಗಗನವದು ಬಾಗಿದೆ
ಸುತ್ತ ಮುತ್ತಲೂ ಎಲ್ಲಾ ಕತ್ತಲೆಯು ಕವಿದಿದೆ 
ಹಗಲು ಹೊತ್ತು ಕೂಡ ಇರುಳೆನಿಸಿ ಬಿಟ್ಟಿದೆ 

ಆಗಿಹುದು ಢಿಕ್ಕಿ ಮೋಡಕ್ಕೆ ಮೋಡ 
ನೋವಲ್ಲಿ  ಬಿಕ್ಕಿ ಬಿಕ್ಕಿ ಅಳುತಿಹುದ  ನೋಡ
 ಕಣ್ಣೀರ ಧಾರೆ ಹರಿದಿಹುದು ಧರೆಗೆ 
'ಮಳೆ' ಎನ್ನುವೆವು ಈ 'ಕಣ್ಣೀರ ಕೋಡಿ' ಗೆ...



[ವಿ.ಸೂ.  ಬ್ಲಾಗ್  ಮಿತ್ರರಾದ  ಪ್ರಕಾಶ್  ಹೆಗ್ಡೆ  ಯವರು  ತಮ್ಮ  ಬ್ಲಾಗ್   'ಛಾಯಾ-ಚಿತ್ತಾರ'  ಬ್ಲಾಗ್ ನಲ್ಲಿ ಪ್ರಕಟಿಸಿದ ಕವನ ಹಾಗೂ ಚಿತ್ರಕ್ಕೆ ಪ್ರತಿಕ್ರೀಯೆ ಯಾಗಿ ನಾನು ಬರೆದ ಸಾಲುಗಳಿವು. ಇದೆ ಚಿತ್ರಕ್ಕೆ ಹೊಂದುವಂತೆ   ಪರಾಂಜಪೆ ಸರ್ , ಆಜಾದ್ ಸರ್  ರವರು ಇದೇ ಬ್ಲಾಗ್ ನಲ್ಲಿ  ಬರೆದಿರುವ ಸುಂದರ ಸಾಲಗಳು ಹಾಗೂ ಮತ್ತೊಬ್ಬ ಬ್ಲಾಗ್ ಮಿತ್ರ ಮಹಾಬಲ ಗಿರಿ ಭಟ್ ರು ತಮ್ಮ 'ಕರಾವಳಿ ರೈಲು' ಬ್ಲಾಗ್ ನಲ್ಲಿ ಹೆಣೆದಿರುವ ಸುಂದರ ಕವಿತೆಯನ್ನು ಮರೆಯದೇ ಓದಿ ]

http://bhava-manthana.blogspot.com/

http://chaayaachittara.blogspot.com/