Monday, October 11, 2010

ವಿನಾಶದ ಹಾದಿಯಲ್ಲಿದೆ ದೇಶ








ಅಲ್ಲೊಂದು ಇಲ್ಲೊಂದು ಭಯೋತ್ಪಾದಕ ದಾಳಿ
ಕೊಲೆ ಸುಲಿಗೆ ಬಾಂಬ್-ಸ್ಫೋಟ ರಕ್ತದೋಕುಳಿ
ಕೆಲವೆಡೆ ಬರಗಾಲ ಕೆಲವೆಡೆ ನೆರೆ ಹಾವಳಿ
ಸಾಯುತಿಹರಿಲ್ಲಿ ಜನ ಹೊಸ ರೋಗಗಳಿಗೆ ನರಳಿ



ಮಳೆ ಬೀಳೋ ಪ್ರಮಾಣ ಆಗಿಹುದು ವಿರಳ
ನದಿ ನೀರಿಗಾಗಿ ಒಳಗೊಳಗೇ ಜಗಳ
ಇದೋ ಕರ್ನಾಟಕ, ಮಹಾರಾಷ್ಟ್ರ, ಕೇರಳ
ಗಡಿಗಾಗಿ ಆಗಿಹುದು ವಿವಾದವು ಬಹಳ



ಬಿಟ್ಟಿಲ್ಲ ಮಾನವರು ಅರಣ್ಯ ನಾಶದ ಚಾಳಿ
ವಿಷಪೂರಿತವಾಗಿದೆ ಉಸಿರಾಡೋ ಗಾಳಿ
ಆಹಾರ ಪದಾರ್ಥಗಳಿಗೆ ಕಲಬೆರೆಕೆಯ ದಾಳಿ
ಕಾರ್ಖಾನೆಗಳಿಂದ 'ಮಾಲಿನ್ಯ' ಎಂಬ ಬಳುವಳಿ



'ಬೆಲೆಯೇರಿಕೆ' ಎಂಬ ರಾಕ್ಷಸನ ಆರ್ಭಟ
ಸಾಗುತ್ತಲೇ ಇದೆ ಬಡಜನರ ಒದ್ದಾಟ
ನಿರುದ್ಯೋಗಿಗಳಿಗೆ ನೌಕರಿಗೆ ಪರದಾಟ
ಇನ್ನೊಂದು ಸಮಸ್ಯೆ ಜನಸಂಖ್ಯಾ ಸ್ಫೋಟ



ದೇಶದೆಲ್ಲೆಡೆಯಲ್ಲೂ ಹೊಗೆಯಾಡುತಿದೆ ಅಶಾಂತಿ
ಕಾಪಾಡಬೇಕಿದೆ ಸಮನ್ವಯ -ಶಾಂತಿ
ಜನನಾಯಕರುಗಳಿಗೆ ಕುರ್ಚಿಯದೆ ಭ್ರಾಂತಿ
ಯುವಶಕ್ತಿ ಯಿಂದಲೇ ಆಗಬೇಕಿದೆ ಕ್ರಾಂತಿ



ಎಚ್ಚೆತ್ತುಕೊಳ್ಳಲಿ ಸಾಮಾನ್ಯ ಜನತೆ
ಇರಬಹುದು ಇಲ್ಲಿ ತಿಳುವಳಿಕೆ ಕೊರತೆ
ಉಳಿಸಬೇಕಿದೆ ನಮ್ಮ ದೇಶದ ಘನತೆ
ಹಚ್ಚೋಣ ನಾವೆಲ್ಲಾ ಏಕತೆಯ ಹಣತೆ



ಬನ್ನಿರಿ ಎಲ್ಲರು ಇಲ್ಲಿ ಒಂದಾಗೋಣ
ದೇಶ ಕಟ್ಟಲು ನಾವು ಕೈ ಕೈ ಹಿಡಿಯೋಣ
ಜಾತಿ ಮತ ಮರೆತು ಒಂದಾಗಿ ಬೆರೆಯೋಣ
ತಾಯ್ನಾಡ ಏಳಿಗೆಗೆ ಒಟ್ಟಾಗಿ ಶ್ರಮಿಸೋಣ